ಬೆಳ್ತಂಗಡಿ: ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಅವರ ಬಗ್ಗೆ ರಾಜಕೀಯ ದುರದ್ದೇಶದಿಂದ ಬಿಲ್ಲವ ಸಂಘಗಳ ಒಕ್ಕೂಟದ ಹೆಸರಿನಲ್ಲಿ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಸಂದೇಶದ ಹಿಂದೆ ಯಾರೆಲ್ಲಾ ಇದ್ದಾರೆ ಅವರಿಗೆ ಅಳದಂಗಡಿ ಕಾರಣಿಕ ಕ್ಷೇತ್ರದ ಶ್ರೀ ಕಲ್ಲುರ್ಟಿ ದೈವವು ಶಿಕ್ಷೆ ನೀಡಲಿ ಎಂದು ಸನ್ನಿಧಾನದಲ್ಲಿ ಬಿಲ್ಲವ ಸಮಾಜದ ಪ್ರಮುಖರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಹರಕೆಯನ್ನು ಸಲ್ಲಿಸಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಸಿದ್ಧಾಂತವನ್ನು ತನ್ನಲ್ಲಿ ಅಳವಡಿಸಿಕೊಂಡು ಉತ್ತಮವಾದ ಕೆಲಸ ಕಾರ್ಯಗಳನ್ನು ಶಾಸಕ ಹರೀಶ್ ಪೂಂಜರವರು ನಿರ್ವಹಿಸುತ್ತಿದ್ದಾರೆ.ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಅದೆಷ್ಟೋ ಬಿಲ್ಲವ ಸಮುದಾಯದ ಸಂಘ ಸಂಸ್ಥೆಗಳಿಗೆ ದೊಡ್ಡಮಟ್ಟದ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.
ಸಂಘದ ಪ್ರಗತಿಯ ಕೆಲಸಕ್ಕೆ ವೈಯಕ್ತಿಕ ಹಾಗೂ ಸರಕಾರದಿಂದ ಅನುದಾನವನ್ನು ನೀಡಿ ಬಿಲ್ಲವ ಸಂಘದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಪಿತೂರಿ ನಡೆಸಿ ಸಂದೇಶ ರವಾನಿಸುವುದನ್ನು ಭಾರತೀಯ ಜನತಾ ಪಾರ್ಟಿಯ ಮುಖಾಂತರ ಹಲವು ಹುದ್ದೆಗಳನ್ನು ಅಲಂಕರಿಸಿದ ಬಿಲ್ಲವ ಸಮಾಜದ ನಾವುಗಳ ಸಹಿಸುವುದಿಲ್ಲ.
ಇಂತಹ ಸಂದೇಶ ರವಾನೆ ಮಾಡಿದ ಅತೃಪ್ತ ಆತ್ಮಗಳಿಗೆ, ಇದರ ಹಿಂದೆ ಇರುವ ಕೀಡಿಗೇಡಿಗಳಿಗೆ ಭಾರತೀಯ ಜನತಾ ಪಾರ್ಟಿಯಲ್ಲಿ ದುಡಿಯುತ್ತಿರುವ ನಾವು ಸೂಕ್ತ ಉತ್ತರವನ್ನು ನೀಡಬೇಕು ಕಾರಣಿಕ ಶಕ್ತಿ ಶ್ರಿ ಕಲ್ಲುರ್ಟಿ ಅವರಿಗೆ ಸರಿಯಾದ ಬುದ್ಧಿ ಕಲಿಸಿ ಶಿಕ್ಷೆ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಬಿಲ್ಲವ ಸಮಾಜದ ಪ್ರಮುಖರು,ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್ ಹೇಳಿದರು.