ಕಲಬುರಗಿ : ಮೇ.9 ರ ರಂಜಾನ್ ದಿನದಂದು ಆಜಾನ್ ವಿರುದ್ದ ಹನುಮಾನ್ ಚಾಲೀಸ್ ಆಂದೋಲನ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.
ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು, ಆಜಾನ್ ವಿರುದ್ಧ ಮೇ 9 ರ ರಂಜಾನ್ ದಿನ ಮತ್ತೆ ಹೋರಾಟ ಶುರು ಮಾಡುತ್ತೇವೆ. ರಂಜಾನ್ ದಿನ ಮಸೀದಿಗಳಲ್ಲಿ ಮುಸ್ಲಿಮರು ಆಜಾನ್ ಮೊಳಗಿಸುವ ಐದೂ ಬಾರಿಯೂ ಮಸೀದಿಯ ಸಮೀಪದಲ್ಲಿರುವ ದೇವಸ್ಥಾನಗಳಲ್ಲಿ ನಾವು ಹನುಮಾನ್ ಚಾಲೀಸ್ ಮೊಳಗಿಸುತ್ತೇವೆ ಎಂದು ಹೇಳಿದ್ದಾರೆ.
ನಾವು ಆಜಾನ್ ಸೆ ಆಜಾದಿ ಕೇಳುತ್ತಿರುವುದು ನಮಗಾಗಿ ಅಲ್ಲ, ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಈ ಆಜಾದಿ ಬೇಡುತ್ತಿದ್ದೇವೆ. ಇದು ಶ್ರೀರಾಮ ಸೇನೆಯ ಬೇಡಿಕೆ ಮಾತ್ರವಲ್ಲ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ನ್ಯಾಯಾಲಯದ ನಿರ್ದೇಶನ ಪಾಲಿಸಲು ಇವರಿಗೆ ತೊಂದರೆ ಇದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
ಮಸೀದಿಗಳ ಮೇಲಿನ ಮೈಕ್ ಗಳನ್ನು ತೆಗೆದು ಹಾಕಲು ರಾಜ್ಯ ಸರ್ಕಾರಕ್ಕೆ ಮೇ 9 ರ ವರೆಗೆ ಗಡುವು ಕೊಟ್ಟಿದ್ದೇವೆ. ಅಷ್ಟರೊಳಗೆ ಮಸೀದಿ ಮೇಲಿನ ಮೈಕ್ ಗಳನ್ನು ತೆರವುಗೊಳಿಸಿ ಇಲ್ಲವೇ ಒಳಗಡೆ ಇರಿಸಿ. ಇದ್ಯಾವುದೂ ಮಾಡದಿದ್ರೆ ಮೇ 9 ರ ರಂಜಾನ್ ದಿನ ಮಸೀದಿ ಸಮೀಪದಲ್ಲಿರುವ ಮಂದಿರಗಳಲ್ಲಿ ಹನುಮಾನ ಚಾಲೀಸ್ ಹಾಕುತ್ತೇವೆ. ರಾಜ್ಯದ ಎಲ್ಲಾ ಮಸೀದಿಗಳ ಬಳಿ ಇರುವ ಮಂದಿರಗಳಲ್ಲಿ ಹನುಮಾನ ಚಾಲೀಸ್ ಹಾಕಲಾಗುವುದು ಎಂದರು.
ಮಸೀದಿ ಸಮೀಪದಲ್ಲಿರುವ ಮಂದಿರಗಳಲ್ಲಿ ಆಜಾನ್ ಸಮಯದಲ್ಲಿಯೇ ಹನುಮಾನ್ ಚಾಲಿಸ್ ಹಾಕುವುದರಿಂದ ಶಾಂತಿ ಭಂಗ ಆಗುತ್ತೇ ಅನ್ನುವುದಾದ್ರೆ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಕಿವಿ ಮಾತು ಹೇಳಿದ್ರು. ಸರ್ಕಾರ ಮೊದಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಮಸೀದಿ ಮೇಲಿನ ಮೈಕ್ ಗಳನ್ನು ತೆಗೆಸಬೇಕು. ಇಲ್ಲದಿದ್ರೆ ನಮ್ಮ ಅಭಿಯಾನ ನಿಶ್ಚಿತ. ಇದರಿಂದ ಅಂದು ಶಾಂತಿ ಭಂಗವಾದ್ರೆ ಅದಕ್ಕೆ ಸರ್ಕಾರ ಮತ್ತು ಸಿಎಂ ಬೊಮ್ಮಾಯಿ ಅವರೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.