ಮೈಸೂರು:ಕೋವಿಡ್ ಪ್ರಕರಣ ದೇಶಾದ್ಯಂತ ಸಡ್ಡು ಮಾಡುತ್ತಿರುವಾಗಲೇ ‘ಮೈಸೂರು ಜಿಲ್ಲೆಯಲ್ಲಿ ದಸರಾ ಮಾಡಲು ಹೊರಟಿದ್ದಾರೆ. ತುಸು ಎಚ್ಚರ ತಪ್ಪಿದರೂ ಜಂಬೂ ಸವಾರಿ ಹೋಗಿ ಬಂಬೂ ಸವಾರಿ ಆದೀತು’ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಎಚ್ಚರಿಕೆ ನೀಡಿದರು.
ಅವರು ಮಾಧ್ಯಮದೊಡನೆ ಮಾತನಾಡಿ ದಸರಾ ಆಚರಿಸುತ್ತೀರಾ? ಕೋವಿಡ್ ನಿಯಂತ್ರಿಸುತ್ತೀರಾ ಎಂದು ಪ್ರಶ್ನಿಸಿದರು, ‘ಸಾಂಕೇತಿಕವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಿದರೆ ಸಾಕು. ಯಾವುದೇ ಕಾರ್ಯಕ್ರಮ ಬೇಡ. ಎರಡು ಸಾವಿರ ಜನರ ಸೇರಿಸಿದರೆ ಅದಕ್ಕಾಗಿ ಈಗಲೇ ಆಸ್ಪತ್ರೆ ಸಿದ್ಧಪಡಿಸಬೇಕಾಗುತ್ತದೆ. ಈಗಲೇ ಹಾಸಿಗೆಗಳು ಇಲ್ಲ. ಹೀಗಾಗಿ, ಹುಷಾರ್ ಆಗಿ ಆಚರಿಸಿ’ ಎಂದರು.
‘ಮೈಸೂರು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರಿಗೆ ಗಾಂಭೀರ್ಯವೇ ಅರ್ಥವಾಗುತ್ತಿಲ್ಲ. ಜಿಲ್ಲೆಯ ಹಿರಿಯರೂ ಅದನ್ನು ಅರ್ಥ ಮಾಡಿಸುತ್ತಿಲ್ಲ. ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಜಿ.ಟಿ. ದೇವೇಗೌಡ, ಎಸ್.ಎ. ರಾಮದಾಸ್, ಸಾ.ರಾ. ಮಹೇಶ್ ಸಲಹೆ ನೀಡಬೇಕು’ ಎಂದು ನುಡಿದರು.