ಮಂಗಳೂರು: ಸೆ.10 ರಂದು ಕಾಂಗ್ರೆಸ್ ಜಿಲ್ಲಾ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿಯ ಪ್ರಯುಕ್ತ ಗುರು ಸಂದೇಶ ಯಾತ್ರೆ ನಡೆಯಲಿದೆ. ವಿಧಾನ ಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹಿಂದುಳಿದ ವರ್ಗಗಳ ವಿಭಾಗದ ಪ್ರಮುಖ ವಿಶ್ವಾಸ್ ಕುಮಾರ್ ದಾಸ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾತ್ರೆಯು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಟು ಕೆ.ಎಸ್.ರಾವ್ ರಸ್ತೆ, ಗೋವಿಂದ ಪೈ ಸರ್ಕಲ್, ಡೊಂಗರಕೇರಿ, ಅಳಕೆ ಮೂಲಕ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಾರಾಯಣ ಗುರು ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ಮುಕ್ತಾಯವಾಗಲಿದೆ. ಎಂದಿದ್ದಾರೆ.
ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವವರಿಗೆ ಗುರು ಸಂದೇಶ ಯಾತ್ರೆಯ ಮೂಲಕ ಶಾಂತಿ, ಸೌಹಾರ್ದ, ಭಾತೃತ್ವ, ಮಾನವೀಯತೆ, ಸಾಮರಸ್ಯದಿಂದ ಒಂದಾಗಿ ಬದುಕಬೇಕು ಎಂಬ ಧ್ಯೇಯವನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ. ಪಕ್ಷದ ಪ್ರಮುಖರು, ಹಿಂದುಳಿದ ಸಮುದಾಯಗಳ ಅನುಯಾಯಿಗಳು ಭಾಗವಹಿಸಲಿದ್ದಾರೆ’ ಎಂದರು.
ನಾರಾಯಣ ಗುರುಗಳ ಜಯಂತಿಯ ಸರ್ಕಾರಿ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡುತ್ತಿರುವುದು ಖಂಡನೀಯ ಎಂದ ಅವರು, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಬೇಕು ಎಂದು ಆಗ್ರಹಿಸಿದ್ದಾರೆ.