ಕಲಬುರಗಿ ಏ 21 :- ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣ ಬಗೆದಷ್ಟು ಬಯಲಾಗ್ತಿದೆ. ಪ್ರಕರಣದಲ್ಲಿ ಬಿಜೆಪಿ ನಾಯಕಿಯ ಹೆಸರು ಕೇಳಿ ಬಂದಿದ್ದರಿಂದ ಬಿಜೆಪಿ ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಆದ್ರೆ ಇದೀಗ ಈ ಪ್ರಕರಣದ ಉರುಳು ಕಾಂಗ್ರೆಸ್ ಗೂ ಸುತ್ತಿಕೊಂಡಿದೆ. ಈ ನಡುವೆ ತಪ್ಪು ಮಾಡಿದವರು ಯಾರೇ ಇರಲಿ, ಬಿಡುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಗುಡುಗಿದ್ದಾರೆ.
ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದಲ್ಲಿ ಆ ಶಾಲೆಯ ಕಾರ್ಯದರ್ಶಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸಿಐಡಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ. ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿರುವ ದಿವ್ಯಾ ಮತ್ತು ಅವರ ಶಾಲೆಯ ಟೀಂನ್ನು ಬಂಧಿಸಲು ಸಿಐಡಿ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಅವರು ಕರ್ನಾಟಕ ಬಿಟ್ಟು ಮಹಾರಾಷ್ಟ್ರದಲ್ಲಿ ಅವಿತಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಸಿಐಡಿಯ ಒಂದು ಮಹಾರಾಷ್ಟ್ರಕ್ಕೂ ಹೋಗಿದೆ. ಆದ್ರೂ ಇನ್ನೂ ಸಿಐಡಿ ಕೈಗೆ ಸಿಕ್ಕಿಲ್ಲ. ಇದೀಗ ಅದರ ಉರುಳು ಸ್ವತಃ ಕಾಂಗ್ರೆಸ್ ಗೂ ಸುತ್ತಿಕೊಂಡಿದೆ. ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಗನ್ ಮ್ಯಾನ್ ನನ್ನು ಸಿಐಡಿ ಬಂಧಿಸಿದೆ. ಈ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎಂ.ವೈ.ಪಾಟೀಲ್ ಅವರ ಗನ್ ಮ್ಯಾನ್ ಆಗಿದ್ದ DAR ಪೇದೆ, ಹಯ್ಯಾಳ ದೇಸಾಯಿ ಸಹ ಮೊನ್ನೆ ನಡೆದ ಪಿ.ಎಸ್.ಐ ನೇಮಕಾತಿಯಲ್ಲಿ ಆಯ್ಕೆಯಾಗಿದ್ದು, ಇದೂ ಸಹ ಅಕ್ರಮ ನೇಮಕಾತಿ ಎನ್ನುವುದು ಪತ್ತೆ ಹಚ್ಚಿರುವ ಸಿಐಡಿ, ಶಾಸಕರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಮತ್ತು ಆತನ ಆಪ್ತ ರುದ್ರಗೌಡ ಎನ್ನುವಾತನನ್ನು ಬಂಧಿಸಿದ್ದಾರೆ. ಇನ್ನೂ ಈ ಅಕ್ರಮದ ಜಾಲ ಎಲ್ಲೆಲ್ಲಿ ವ್ಯಾಪಿಸಿದೆ. ಇದರ ಆಳ ಅಗಲ ಎಷ್ಟಿದೆ ಎನ್ನುವುದನ್ನು ಸಿಐಡಿ ಪ್ರಾಮಾಣಿಕ ತನಿಖೆ ಮೂಲಕ ಬಯಲಿಗೆಳೆಯಬೇಕಾಗಿದೆ