ಮಂಗಳೂರು; ಹೊರ ರಾಜ್ಯದಿಂದ ಬಂದು ಅಡಿಕೆ ವ್ಯಾಪಾರ ಮಾಡಿ, ಹಮ್ ಭಾಯ್ ಭಾಯ್ ಎನ್ನುತ್ತಲೇ ಕರಾವಳಿಯ ಅಡಿಕೆ ವ್ಯಾಪಾರಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಸೇಠುಗಳು ಟಾಟಾ ಬಾಯ್ ಬಾಯ್ ಹೇಳಿ ಪರಾರಿಯಾಗಿದ್ದಾರೆ. ಇದೀಗ ವಂಚನೆಗೆ ಒಳಗಾದ ನಮ್ಮ ಅಡಿಕೆ ವ್ಯಾಪಾರಿಗಳು ಪೊಲೀಸ್ ಠಾಣೆಯ ಮೆಟ್ಟೇರಿದ್ದಾರೆ.
ಗುಜರಾತ್ ಮೂಲದ ಮೂವರು ಅಡಿಕೆ ವ್ಯಾಪಾರಿಗಳು ವಂಚಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.ಅದರಲ್ಲೂ ಸುಮಾರು ಮೂವತ್ತು ವರ್ಷಕ್ಕಿಂತಲೂ ಹೆಚ್ಚು ಕಾಲ ಇಲ್ಲಿ ಅಡಿಕೆ ವ್ಯಾಪಾರಿ ಮಾಡುತ್ತಿದ್ದ ಸೇಠು ಒಬ್ಬರು ಕೂಡ ಪರಾರಿಯಾಗಿದ್ದು, ಹಣ ಕಳೆದುಕೊಂಡ ನಮ್ಮ ಅಡಿಕೆ ವ್ಯಾಪಾರಿಗಳು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.ಇನ್ನು ಈ ಸೇಠುಗಳಿಂದ ವಂಚನೆಗೊಳಗಾದ ಮಂಗಳೂರಿನ ಅಡಿಕೆ ವ್ಯಾಪಾರಿ ಯೂಸಫ್ ಅನ್ನೋರು ತನಗೆ 8.98 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಇದೀಗ ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇವರು ಮಂಗಳೂರಿನ ಬೀಬಿ ಅಲಾಬಿ ರಸ್ತೆಯಲ್ಲಿ ಅಡಿಕೆ ವ್ಯಾಪಾರಿಯಾಗಿದ್ದು ಗುಜರಾತ್ ನ ಕಮಲೇಶ್ ಪಡಾಲಿಯಾ ಎಂಬಾತನಿಗೆ 14,98,770 ರೂಪಾಯಿ ಮೌಲ್ಯದ ಅಡಿಕೆ ಮಾರಾಟ ಮಾಡಿದ್ದರು.ಅದರಲ್ಲಿ ಹಂತ ಹಂತವಾಗಿ ತ 6 ಲಕ್ಷ ರೂಪಾಯಿ ನೀಡಿದ್ದಾನೆ.ಉಳಿದ 8,98,770 ರೂ.ಗಳನ್ನು ನೀಡಿಲ್ಲ. ಸದ್ಯ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಆತನಿಗೆ ಬೈಕಂಪಾಡಿಯ ಎಪಿಎಂಸಿ ಯಾರ್ಡ್ನಲ್ಲಿ ಗೋದಾಮು ಇದ್ದು ಅದನ್ನು ಮುಚ್ಚಲಾಗಿದೆ. ಆತನ ಗೋದಾಮಿ ನಲ್ಲಿದ್ದ ಸುಮಾರು 115 ಚೀಲ ಅಡಿಕೆಯನ್ನು ಆತನ ಸಂಬಂಧಿಕರಾದ ಭಗವಾನ ಜಿ. ಲಕ್ಷ್ಮೀದಾಸ್ ಹಿಂಸು ಮತ್ತು ದಿಲೀಪ್ ಕುಮಾರ್ ಲಕ್ಷ್ಮೀದಾಸ್ ಹಿಂಸು ಅವರ ಗೋದಾಮಿಗೆ ಹಸ್ತಾಂತರಿಸಿದ್ದಾನೆ ಎನ್ನಲಾಗಿದೆ. ಪ್ರಸ್ತುತ ಮೂವರು ಕೂಡ ಗೋದಾಮನ್ನು ಮುಚ್ಚಿ ಪರಾರಿಯಾಗಿದ್ದಾರೆ ಎಂದು ಯೂಸಫ್ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಪುತ್ತೂರು , ಬೆಳ್ಳಾರೆ ಸುಳ್ಯಭಾಗದ ಅಡಿಕೆ ವ್ಯಾಪಾರಸ್ಥರಿಗೆ ಇದೇ ಮೂವರು ಸೇಠ್ ಗಳು ಹಣ ನೀಡದೆ ವಂಚಿಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.ಇನ್ನು ಎಲ್ಲಾ ಸೇಠುಗಳು ಸೇರಿ ಸುಮಾರು 50 ಕೋಟಿಗೂ ಹೆಚ್ಚು ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಹಲವರಿಗೆ ವಂಚಿಸಿದ್ದು ಇನ್ನಷ್ಟು ದೂರುಗಳು ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ವಂಚನೆಗೊಳಗಾದವರು ಒಂದಷ್ಟು ಮಂದಿ ಗುಜರಾತಿಗೆ ಹುಡುಕಿಕೊಂಡು ಹೋದ ವೇಳೆ ಅಲ್ಲಿ ಈ ಸೇಠುಗಳ ಸಂಬಂಧಿಕರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೆಲವು ಅಡಿಕೆ ವ್ಯಾಪಾರಿಗಳು ಹೇಳಿದ್ದಾರೆ.