ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ಇದ್ದ ಹಳೆ ಮನೆ ತೆರವುಗೊಳಿಸಿ ನೂತನ ಮನೆ ನಿರ್ಮಾಣಕ್ಕೆ ಮುಂದಾದ ಕುಟುಂಬದ ಫೌಂಡೇಶನ್ ಕಿತ್ತೆಸೆದು ಅರಣ್ಯ ಇಲಾಖೆ ದರ್ಪ ತೋರಿದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿಡ್ಕ ಕುದ್ದಮನೆ ಸೇಸ ಗೌಡ ಎಂಬವರ ಕುಟುಂಬ ಸುಮಾರು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಅ.6 ರಂದು ಅರಣ್ಯ ಇಲಾಖೆ ಕಿತ್ತೆದು ಬಡ ಕುಟುಂಬದ ಮುಂದೆ ದರ್ಪ ತೋರಿರುವ ಬಗ್ಗೆ ಮನೆ ಮಗ ನೊಂದು ಆತ್ಮಹತ್ಯೆಗೆ ಮುಂದಾಗಿದ್ದ.

ಘಟನೆ ವಿಚಾರ ತಿಳಿದು ಅ.7 ರಂದು ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಅರಣ್ಯಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ಥಳದಲ್ಲೆ ಶೆಡ್ ನಿರ್ಮಾಣಕ್ಕೆ ಮುಂದಾದರು. ಈ ವೇಳೆ ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಗಂಭೀರ ಮಾತಿನ ಚಕಮಖಿಗೆ ಕಾರಣವಾಯಿತು.

309 ಸರ್ವೇ ನಂಬರ್ ನಲ್ಲಿ ಸುಮಾರು 120 ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಆದರೆ ಇದು ಅರಣ್ಯ ಎಂದು ಇರುವುದರಿಂದ ಅರಣ್ಯ ಇಲಾಖೆ ಮನೆ ಕೆಡವಿದೆ. ಮನೆ ಮಂದಿಗೆ ಯಾವುದೇ ನೋಟಿಸ್ ಮಾಹಿತಿ ನೀಡದೆ ತೆರವುಗೊಳಿಸಿದ್ದಾರೆ ಎಂದು ಶಾಸಕರ ಸಮ್ಮುಖದಲ್ಲಿ ಊರವರೊಡಗೂಡಿ ತಾತ್ಕಾಲಿಕ ಶೆಡ್ ನಿರ್ಮಿಸಿದರು. ಇದಕ್ಕೆ ಅಡ್ಡಿ ಪಡಿಸುವ ಮೊದಲು ಕಂದಾಯ ಇಲಾಖೆ ಹಾಗೂ ಅರಣ್ಯ ಜಂಟಿ ಸರ್ವೇ ನಡೆಸಿ ಬಳಿಕ ತೆರವುಗೊಳಿಸಿ ಎಂದು ಸೂಚಿಸಿದರು.

ಸ್ಥಳದಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಶಾಸಕ ಹರೀಶ್ ಪೂಂಜ ಅವರು, ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಸಚಿವರು ಸದ್ಯ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಯತಸ್ಥಿತಿ ಕಾಪಾಡಲು ಸೂಚಿಸಿದರಲ್ಲದೆ, ಮೇಲಧಿಕಾರಿಗಳಿಂದ ವರದಿ ಪಡೆದು ಬಳಿಕ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದರು.
ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ಉಪ್ಪಿನಂಗಡಿ ಅರಣ್ಯಧಿಕಾರಿ ಜಯಪ್ರಕಾಶ್, ಕಳೆಂಜ ಉಪ ವಲಯರಣ್ಯಾಧಿಕಾರಿ ಪ್ರಶಾಂತ್, ಡಿವೈಎಸ್ಪಿ ಥರೋಟ್ ಎಸ್ಐ ಧರ್ಮಸ್ಥಳ ಸಮರ್ಥ್ ಮತ್ತು ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ , ಬೆಳ್ತಂಗಡಿ ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ , ಪುಂಜಾಲಕಟ್ಟೆ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್ ಸ್ಥಳದಲ್ಲಿದ್ದರು.