ಬೆಂಗಳೂರು; 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಇಂದಿನಿಂದ ಸರ್ಕಾರಿ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ನಿನ್ನೆ ತಡರಾತ್ರಿ 2-30ರವರೆಗೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದ್ರು.ಸಿಎಂ ಬೊಮ್ಮಾಯಿ, ಸಚಿವ ಆರ್. ಅಶೋಕ್ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾತುಕತೆ ನಡೆಸಿದರು.
ನಿನ್ನೆ 10.45ರವರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಿ ನೌಕರರ ಸಂಘದ ಜೊತೆಗೆ ಬೇಡಿಕೆ ಈಡೇರಿಕೆ ಕುರಿತಂತೆ ಸಭೆಯಲ್ಲಿ ಚರ್ಚಿಸಿದರು. ಮಧ್ಯಂತರ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸೋದಾಗಿ ನೌಕರರ ಮುಂದೆ ಸರ್ಕಾರದ ನಿಲುವನ್ನು ಇಟ್ಟಿದ್ದಾರೆ. ಸರ್ಕಾರದ ನಿರ್ಧಾರವನ್ನು ನೌಕರರ ಸಂಘದೊಂದಿಗೆ ಚರ್ಚಿಸೋ ಸಂಬಂಧ ರಾತ್ರಿ 2.30ರವರೆಗೆ ಸಂಘದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಸಭೆ ನಡೆಸಿ ಚರ್ಚಿಸಿದರು.
ರಾಜ್ಯ ಸರ್ಕಾರ ಮಧ್ಯಂತರ ವೇತನವಾಗಿ ಶೇ.7 ರಿಂದ 8ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದೆ. ಆದ್ರೇ ನಾವು ಶೇ.20 ರಿಂದ 40ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ. ಇಂದು ಮತ್ತೊಮ್ಮೆ ಸಿಎಂ ಜೊತೆಗೆ ಚರ್ಚಿಸಲಾಗುತ್ತದೆ ಎಂದರು.
ಈ ಹಿನ್ನಲೆಯಲ್ಲಿ ಇಂದು ಮತ್ತೊಂದು ಸುತ್ತಿನ ಮಾತುಕತೆಯನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಮೈಸೂರಿನ ನಿಗದಿತ ಕಾರ್ಯಕ್ರಮಕ್ಕೆ ತೆರಳೋ ಮುನ್ನ ಸರ್ಕಾರಿ ನೌಕರರ ಸಂಘವು ಚರ್ಚಿಸಲಿದೆ. ತಾತ್ಕಾಲಿಕವಾಗಿ ಶೇ.7 ರಿಂದ 8ರಷ್ಟು ಮಧ್ಯಂತರ ವೇತನ ಹೆಚ್ಚಳದ ಭರವಸೆಯ ಬಗ್ಗೆ ಚರ್ಚೆ ನಡೆಸಿ ಎಷ್ಟು ಮಧ್ಯಂತರ ವೇತನ ಜಾರಿಗೊಳಿಸೋ ಆದೇಶವನ್ನು ಇಂದು ಸಿಎಂ ಹೊರಡಿಸಲಿದ್ದಾರೆ ಎನ್ನುವ ಬಗ್ಗೆ ಕಾದು ನೋಡಬೇಕಿದೆ. ಆ ಬಳಿಕ ಸರ್ಕಾರಿ ನೌಕರರ ಸಂಘದ ಅನಿರ್ಧಿಷ್ಟಾವಧಿಯ ಮುಷ್ಕರದ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ.