ಕುಂದಾಪುರ: ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ| ರಾಬರ್ಟ್ ರೆಬೆಲ್ಲೊ ಅವರನ್ನು ಲೈಂಗಿಕ ಕಿರುಕುಳ ಸಹಿತ ವಿವಿಧ ಆರೋಪದ ಮೇರೆಗೆ ಜೂನ್ 4ರಂದು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ಅವರು ವೈದ್ಯಾಧಿಕಾರಿಯನ್ನು ಅಮಾನತು ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.
ಇನ್ನು ಸಾರ್ವಜನಿಕರು ವೈದ್ಯಾಧಿಕಾರಿ ವಿರುದ್ಧ ಆರೋಗ್ಯ ಸಚಿವರಿಗೆ ರೋಗಿಗಳ ಜತೆಗಿನ ದುರ್ನಡತೆಯ ಕುರಿತ ದೂರು ಅರ್ಜಿ, ಸಹ ವೈದ್ಯೆಯಿಂದ ಲೈಂಗಿಕ ಕಿರುಕುಳ ಕುರಿತು ದಾಖಲಾದ ಪ್ರಕರಣ, ಕೇಸ್ ಸಂಬಂಧ ಪೊಲೀಸ್ ನಿರೀಕ್ಷಕರಿಂದ ಬಂದ ಪತ್ರ, ಆಸ್ಪತ್ರೆ ಆವರಣದಲ್ಲಿ ಕೊಳಚೆ ನೀರು, ತ್ಯಾಜ್ಯ ಹರಿದು ರೋಗ ಬರಲು ಆಸ್ಪದವಿದ್ದರೂ ನಿರ್ಲಕ್ಷ್ಯ ತೋರಿರುವುದು, ಹೀಗೆ ವಿವಿಧ ಆರೋಪಗಳಿಗಾಗಿ ಇಲಾಖಾ ವಿಚಾರಣೆ ಬಾಕಿ ಇರಿಸಿ ವೈದ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯ ಇಎನ್ಟಿ ವೈದ್ಯರ ಹುದ್ದೆಯ ಸ್ಥಳಕ್ಕೆ ವೈದ್ಯಾಧಿಕಾರಿಯ ಜೀವನ ನಿರ್ವಹಣೆ ಭತ್ತೆಗಾಗಿ ನಿಗದಿ ಪಡಿಸಲಾಗಿದೆ. ಆರೋಗ್ಯ ಇಲಾಖೆಯ ಆಯುಕ್ತರ ಅನುಮತಿಯನ್ನು ಪಡೆಯದೇ ಕೇಂದ್ರ ಸ್ಥಳ ತೊರೆಯದಂತೆ ಸೂಚನೆ ನೀಡಲಾಗಿದೆ. ಸದ್ಯ ಡಾ| ರಾಬರ್ಟ್ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.