ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಬೈಕ್ ಹಾಗೂ ರಾಜ್ಯ ಸಾರಿಗೆ ಬಸ್ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೋರ್ವ ಸಹ ಸವಾರ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಲ್ಲೇ ಸಾವಿಗೀಡಾದ ಯುವಕ ರಾಜೇಶ್ ಕೊಟ್ಟಿಗೆಹಾರ ನಿವಾಸಿ ಎಂದು ತಿಳಿದು ಬಂದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾಸರಹಳ್ಳಿ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೈಕಿನಲ್ಲಿ ಬಾಳೂರಿನ ಚೆನ್ನಡಲು ಗ್ರಾಮದ ರಾಜೇಶ್ ಎಂಬ 21ರ ಪ್ರಾಯದ ಯುವಕ ಹಾಗೂ ದಾಸರಹಳ್ಳಿಯ ಅಶೋಕ್ ಇಬ್ಬರು ಬೈಕಿನಲ್ಲಿ ಸಂಚಾರ ಮಾಡುತ್ತಿದ್ದರು, ಸರ್ಕಾರಿ ಬಸ್ಸು ಮತ್ತಿಕಟ್ಟೆಯ ಕಡೆಗೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ.
ಈ ಅಪಘಾತದಲ್ಲಿ ಬಸ್ಸಿನ ಚಕ್ರಕ್ಕೆ ಸಿಲುಕಿದ ರಾಜೇಶ್ ಎಂಬ ಯುವಕನ ತಲೆ ಹಾಗೂ ಮುಖದ ಭಾಗ ಛಿದ್ರ ಛಿದ್ರವಾಗಿದ್ದು ಆತನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಶೋಕ್ ಎಂಬಾತನಿಗೆ ಗಂಭೀರವಾದ ಗಾಯಗಳಾಗಿದ್ದು ಆತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.