ಮಂಗಳೂರು: ಇಲ್ಲಿ ಮತ್ಸ್ಯಖಾದ್ಯವೇ ವಿಶೇಷ. ತರಹೇವಾರಿ ಮೀನುಗಳ ಖಾದ್ಯವನ್ನು ಇಲ್ಲಿ ಉಣ ಬಡಿಸುತ್ತಿದ್ದರು. ಆಗ ತಾನೇ ಹಿಡಿದಿರುವ ತಾಜಾ ಮೀನುಗಳ ವಿವಿಧ ಖಾದ್ಯಕ್ಕಾಗಿ ಮತ್ಸ್ಯ ಪ್ರಿಯರು ಮರುಳಾಗಿದ್ದರು.
ಹೌದು ಇದು ನಡೆದದ್ದು, ಚಿತ್ರಾಪುರ ಕಡಲತಡಿಯ ಮೊಗವೀರ ಮಹಾಸಭಾ ಮೈದಾನದಲ್ಲಿ. ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ನೇತೃತ್ವದಲ್ಲಿ ನಡೆದ ಶ್ರಮಿಕರ ಸಂಭ್ರಮದ ಕ್ರೀಡಾಕೂಟದಲ್ಲಿ ಸ್ಥಳೀಯ ಮಹಿಳೆಯರಿಂದ ನಡೆದ ಆಹಾರೋತ್ಸವದಲ್ಲಿ ಈ ದೃಶ್ಯ ಕಂಡು ಬಂದಿತ್ತು. ಅಂಜಲ್, ಮಾಂಜಿ, ಬಂಗುಡೆ, ಡಿಸ್ಕೊ, ಮುರು ಮೀನುಗಳ ಫ್ರೈ, ಸಿಗಡಿ-ಪುಂಡಿ ಗಸಿ, ಇಡ್ಲಿ-ಸಿಗಡಿ ಗಸಿ, ಮರುವಾಯಿ ಸುಕ್ಕ, ಮೆಲ್ಗ್ ಗಸಿ, ಗಲಾಯಿ ತೇಡೆ ಗಸಿ, ಚಿಕನ್ ಸುಕ್ಕ, ಶ್ಯಾಮಿಗೆ-ಚಿಕನ್ ಗಸಿ, ಚಿಕನ್ ಕಬಾಬ್ ಹೀಗೆ ವಿವಿಧ ಮತ್ಸ್ಯ-ಮಾಂಸ ಖಾದ್ಯ ಆಹಾರ ಪ್ರಿಯರ ಗಮನ ಸೆಳೆಯಿತು.
ಮಹಿಳೆಯರಿಂದಲೇ ಆಯೋಜನೆಗೊಂಡಿರುವ ಈ ಆಹಾರೋತ್ಸವವು ಪಣಂಬೂರು ಮಹಿಳಾ ಸಮಾಜ ಹಾಗೂ ಕೂಳೂರು ಮಹಿಳಾ ಸಮಾಜ ನೇತೃತ್ವದಲ್ಲಿ ನಡೆಯಿತು. ಒಟ್ಟು 90 ರಷ್ಟು ಮಂದಿ ಮಹಿಳೆಯರು ಈ ಆಹಾರ ಮೇಳದಲ್ಲಿ ವಿವಿಧ ರೀತಿಯಲ್ಲಿ ಕೈ ಜೋಡಿಸಿದ್ದರು. ಸುಮಾರು 4-5 ಸಾವಿರದಷ್ಟು ಮಂದಿ ಈ ಆಹಾರೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬರೀ ಮಹಿಳೆಯರೇ ಸೇರಿ ನಡೆಸುತ್ತಿರುವ ಈ ಆಹಾರೋತ್ಸವಕ್ಕೆ ಜನರಿಂದಲೂ ಉತ್ತಮ ಪ್ರೋತ್ಸಾಹ ದೊರಕುತ್ತಿದೆ. ನಾಳೆಯೂ ಆಹಾರೋತ್ಸವ ನಡೆಯಲಿದ್ದು, ಮಹಿಳೆಯರು ಹೆಚ್ಚಿನ ನಿರೀಕ್ಷೆಯನ್ನು ಇರಿಸಿಕೊಂಡಿದ್ದಾರೆ.