ಮಂಗಳೂರು : ದ.ಕ. ಜಿಲ್ಲಾ ಹಾಲು ಉತ್ಪಾದಕರಿಗೆ ಕೊಂಚ ಸಮಾಧಾನ ತರುವ ಸಿಹಿ ಸುದ್ದಿ ಸಿಕ್ಕಿದೆ. ನಾಲ್ಕು ವರ್ಷಗಳಿಂದ ಯಾವುದೇ ಪ್ರೋತ್ಸಾಹ ಧನವಿಲ್ಲದೆ ಕಂಗೆಟ್ಟಿರುವ ಹಾಲು ಉತ್ಪಾದಕರ ನೆರವಿಗೆ ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಮುಂದಾಗಿದೆ.
ಇದೇ ಅ.11ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 2.05 ರೂ. ಪ್ರೋತ್ಸಾಹಧನ ನೀಡಲು ಸರ್ವಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಪೂರೈಸುವ ಹಾಲಿನ ದರದಲ್ಲಿ ಏರಿಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಹಾಲಿಗೆ ಕನಿಷ್ಠ ಖರೀದಿ ದರ ಲೀಟರ್ಗೆ 29.95 ರೂ ಇದೆ. ಇನ್ನು ಮುಂದೆ ಕನಿಷ್ಠ 32 ರೂ. ದರ ನೀಡಲಾಗುವುದು. ಹೈನುಗಾರರ ನೆರವಿಗಾಗಿ ರಾಜ್ಯ ಸರಕಾರದಿಂದ ಪ್ರತಿ ಲೀಟರ್ಗೆ 3 ರೂ. ನೆರವು ಕೋರಲಾಗಿದೆ. ಅಲ್ಲಿಯತನಕ ಒಕ್ಕೂಟವೇ ಇದರ ಹೊರೆಯನ್ನು ಹೊತ್ತುಕೊಳ್ಳಲಿದೆ. ಅ.11ರ ಒಕ್ಕೂಟದ ವಿಶೇಷ ಸಭೆಯಲ್ಲಿ 2.05 ಪ್ರೋತ್ಸಾಹ ಧನವನ್ನು ಘೋಷಿಸಲಿದ್ದೇವೆ ಎಂದಿದ್ದಾರೆ.
19 ಬಗೆಯ ಹಾಲಿನ ಉತ್ಪನ್ನ ಉತ್ಪಾದನೆಗೆ 5.30 ಲಕ್ಷ ಲೀಟರ್ ಹಾಲು ಬೇಕಾಗುತ್ತದೆ. ಆದರೆ ಪ್ರಸ್ತುತ 4.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಈ ಕಾರಣಕ್ಕೆ ಹೈನುಗಾರರನ್ನು ಪ್ರೋತ್ಸಾಹಿಸಲು ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಿಂದ ಒಕ್ಕೂಟಕ್ಕೆ ದಿನಕ್ಕೆ 10 ಲಕ್ಷ ರೂ.ನಂತೆ ಮಾಸಿಕ 3 ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ. ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಡಿ., ಮಾರುಕಟ್ಟೆ ವ್ಯವಸ್ಥಾಪಕ ರವಿರಾಜ್ ಉಡುಪ ಹಾಜರಿದ್ದರು.