ನವದೆಹಲಿ: ಕೆಜಿಗಟ್ಟಲೆ ಚಿನ್ನಾಭರಣ ಧರಿಸುತ್ತಿದ್ದ ಪೂರ್ವ ದೆಹಲಿಯ ಗಾಂಧಿನಗರದ ವಾಸಿ ಸುಧೀರ್ ಕುಮಾರ್ ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
58 ವರ್ಷದ ಸುಧೀರ್ ಕುಮಾರ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ಯಾನ್ಸರ್, ಮಧುಮೇಹ, ಥೈರಾಯಿಡ್ ಸಮಸ್ಯೆ ಮೊದಲಾದ ಕಾಯಿಲೆಯಿಂದ ಬಳಲುತ್ತಿದ್ದ ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬಾಬಾ ಅವರು ಮೂಲತಃ ಉತ್ತರ ಪ್ರದೇಶದ ಘಾಜಿಯಾಬಾದ್ ನವರಾಗಿದ್ದು, ಸನ್ಯಾಸಿ ಆಗುವ ಮೊದಲು ದೆಹಲಿಯಲ್ಲಿ ವಸ್ತ್ರ ವ್ಯಾಪಾರ ನಡೆಸುತ್ತಿದ್ದರು. ಸನ್ಯಾಸ ದೀಕ್ಷೆ ಪಡೆದುಕೊಂಡ ನಂತರ ಗಾಂಧಿನಗರದಲ್ಲಿ ಗೋಲ್ಡನ್ ಬಾಬಾ ಆಶ್ರಮ ಸ್ಥಾಪಿಸಿದ್ದರು.
ಅವರಿಗೆ ಚಿನ್ನದ ಮೇಲೆ ಹೆಚ್ಚಿನ ವ್ಯಾಮೋಹವಿತ್ತು. ಮೈಮೇಲೆ ಸುಮಾರು 20 ಕೆಜಿಯಷ್ಟು ಬಂಗಾರದ ಆಭರಣ, ದುಬಾರಿ ಬೆಲೆಯ ವಾಚ್ ಗಳನ್ನು ಧರಿಸುತ್ತಿದ್ದರು. ಬಂಗಾರವನ್ನು ತನ್ನ ಇಷ್ಟ ದೈವವನ್ನಾಗಿ ಬಾಬಾ ಭಾವಿಸುತ್ತಿದ್ದರು ಎಂದು ಜನರು ಹೇಳುತ್ತಾರೆ. ಅಲ್ಲದೆ, ಬಾಬಾ ಅವರ ರಕ್ಷಣೆಗಾಗಿ ನಿತ್ಯ 30 ಮಂದಿ ಅಂಗ ರಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಬಾಬಾ ಅವರ ವಿರುದ್ದ ಅಪಹರಣ, ದರೋಡೆ, ದಾಳಿ, ಕೊಲೆ ಬೆದರಿಕೆ ಮತ್ತಿತರ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದವು.