ಬಂಟ್ವಾಳ: ಇಲ್ಲಿನ ಬಾಳ್ತಿಲ ಗ್ರಾಮದ ಕಾಂಪ್ರಬೈಲು ಎಂಬಲ್ಲಿ ಮನೆಮಂದಿ ಜಾತ್ರೆಗೆ ತೆರಳಿದ ಸಂದರ್ಭ ಸುಮಾರು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಸುಮಾರು 9 ಪವನ್ ಚಿನ್ನವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣದ ವಿವರ: ಮನೆ ಮಾಲಕ ಸತೀಶ್ ಶೆಣೈ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ, ಫೆ.4ರಂದು ಕಶೇಕೋಡಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಜಾತ್ರೋತ್ಸವ ಇದ್ದುದ್ದರಿಂದ ಪತ್ನಿಯೊಂದಿಗೆ ಮನೆಗೆ ಬೀಗ ಹಾಕಿ ಸಂಜೆ 6.45 ಕ್ಕೆ ಮನೆಯಿಂದ ಕಶೆಕೋಡಿಗೆ ಹೊರಟಿದ್ದರು. ಉತ್ಸವ ಮುಗಿಸಿ ವಾಪಸ್ ಮನೆಗೆ ಬಂದಾಗ ರಾತ್ರಿ ಸುಮಾರು 10.30 ಆಗಿತ್ತು.ಈ ವೇಳೆ ಮನೆಯ ಹಿಂಬದಿಯ ಬಾಗಿಲು ತೆರೆದಿರುವುದನ್ನು ನೋಡಿದಾಗ ಕಳ್ಳರು ಯಾವುದೋ ಸಾಧನದಿಂದ ಬಾಗಿಲಿನ ಚಿಲಕವನ್ನು ತುಂಡರಿಸಿ ಬಿದ್ದಿರುವುದು ಕಂಡುಬಂದಿದೆ ಎನ್ನಲಾಗಿದೆ.
ಇನ್ನು ಕಪಾಟಿನ ಲಾಕರ್ ನಲ್ಲಿದ್ದ ಸ್ಟೀಲ್ ಡಬ್ಬಿಗಳು ಮಂಚದಲ್ಲಿ ತೆರೆದಿದ್ದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸುಮಾರು 5 ಪವನ್ ತೂಕದ ಒಂದು ಹವಳದ ಮಾಲೆ, ಎರಡೂವರೆ ಪವನ್ ತೂಕದ ಒಂದು ಮುತ್ತಿನ ಸರ, ಒಂದೂವರೆ ಪವನ್ ತೂಕದ ಬೆಂಡೋಲೆ, ಜುಂಕಿ, 5000 ರೂ ನಗದು ಹಣವನ್ನು ಯಾರೋ ಕಳ್ಳರು ಕಳವು ಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


