ಆಂಧ್ರಪ್ರದೇಶ: ನಿವಾರ್ ಚಂಡಮಾರುತದ ನಂತರ ಸಮುದ್ರ ತೀರದಲ್ಲಿ ಚಿನ್ನ ಸಿಗುತ್ತಿದೆ ಎಂದು ಜನರು ಕಡಲತ್ತ ಓಡಿದ ಘಟನೆ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿದ್ದರೂ ಲೆಕ್ಕಿಸದೆ ಜನರು ಉಪ್ಪಡಾ ಬೀಚ್ನಲ್ಲಿ ಚಿನ್ನ ಆಯ್ದುಕೊಳ್ಳಲು ತಾಮುಂದು-ನಾಮುಂದು ಎಂದು ಓಡಿದ್ದಾರೆ.
ಇನ್ನು ಉಪ್ಪಡಾ ಬೀಚ್ನಲ್ಲಿ ಪತ್ತೆಯಾದ ಹಳದಿ ಬಣ್ಣದ ಸಣ್ಣ ಮಣಿಯ ಫೋಟೋವನ್ನು ಸ್ಥಳೀಯರೊಬ್ಬರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಿನ್ನಕ್ಕಾಗಿ 100ಕ್ಕೂ ಹೆಚ್ಚು ಮಂದಿ ಉಪ್ಪಡಾ ಬೀಚ್ಗೆ ಆಗಮಿಸಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡರು ಎಂದು ತಿಳಿಸಿದ್ದಾರೆ.
ಅಂದ್ಹಾಗೆ ಈ ರೀತಿ ಚಿನ್ನ ಹೇಗೆ ಬರುತ್ತೆ ಅನ್ನೋ ಅನುಮಾನ ಎಲ್ಲರಲ್ಲೂ ಮೂಡೋದು ಸಹಜ. ಆದರೆ ಸ್ಥಳೀಯರು ಹೇಳೋದೋ ಬೇರೆ. ಈ ಭಾಗದಲ್ಲಿದ್ದ ಹಲವು ಪುರಾತನ, ಪ್ರಮುಖ ದೇವಸ್ಥಾನಗಳು ಕಾಲಕ್ರಮೇಣ ಸಮುದ್ರದಲ್ಲಿ ಮುಳುಗಿಹೋಗಿ, ಧ್ವಂಸಗೊಂಡಿವೆ. ಇದೀಗ ನಿವಾರ್ ಚಂಡಮಾರುತದಿಂದ ದೊಡ್ಡದೊಡ್ಡ ಅಲೆಗಳು ಸಾಗರದೊಳಗಿಂದ ಏಳುತ್ತಿವೆ. ಹೀಗಾಗಿ ಸಮುದ್ರದ ಅಡಿಯಲ್ಲಿರಬಹುದಾದ ದೇಗುಲಗಳ ವಿಗ್ರಹದಲ್ಲಿರುವ ಆಭರಣಗಳು ಅಲೆಗಳೊಂದಿಗೆ ತೀರಕ್ಕೆ ಬರುತ್ತಿವೆ ಎನ್ನುತ್ತಿದ್ದಾರೆ.
ಇನ್ನು ಪೂರ್ವ ಗೋದಾವರಿಯ ಯು ಕೋಠಾಪಲ್ಲಿ ಮಂಡಲ್ ವ್ಯಾಪ್ತಿಯ ಹಳ್ಳಿಯಲ್ಲಿರುವ ಮೀನುಗಾರರಂತೂ ಬೀಚ್ನಲ್ಲಿ ಬಿದ್ದ ಚಿನ್ನ ಆಯ್ದುಕೊಳ್ಳಲು ತರಾತುರಿಯಿಂದ ಓಡಿದ್ದಾರೆ. ಮುಂಜಾನೆ ಆರುಗಂಟೆಯಿಂದ, ಸಂಜೆಯವರೆಗೂ ಸಮುದ್ರ ತೀರದಲ್ಲಿ ಕಾಲ ಕಳೆದಿದ್ದಾರೆ. ಬಲವಾಗಿ ಗಾಳಿಬೀಸುತ್ತಿದ್ದರೂ ಲೆಕ್ಕಿಸದೆ ಮಹಿಳೆಯರು, ಮಕ್ಕಳು ಬೀಚ್ನಲ್ಲಿ ಗುಂಪುಗೂಡಿದ್ದರು. ಅನೇಕರಿಗೆ ಹಳದಿ ಬಣ್ಣದ ಮಣಿಗಳು ಸಿಕ್ಕಿವೆ. ಆದರೆ ಅದು ಚಿನ್ನವೇ ಹೌದೋ..ಅಲ್ಲವೋ ಎಂಬುದಿನ್ನೂ ದೃಢವಾಗಿಲ್ಲ.
ಪ್ರತಿ ಚಂಡಮಾರುತವೂ ಚಿನ್ನ ಅಥವಾ ಇನ್ಯಾವುದಾದರೂ ಬೆಲೆಬಾಳುವ ವಸ್ತುಗಳನ್ನು ತೀರಕ್ಕೆ ತರುತ್ತದೆ ಎಂದು ನಂಬುವ ಮೀನುಗಾರರು, ಈ ಬಾರಿ ಚಂಡಮಾರುತದ ಬಳಿಕವೂ ಬೀಚ್ನಲ್ಲಿ ಹುಡುಕಾಟ ನಡೆಸಿದ್ದರು.