ಸುಬ್ರಹ್ಮಣ್ಯ: ಕುಮಾರ ಪರ್ವತ ಚಾರಣಿಗರ ಪಾಲಿನ ಆಶ್ರಯದಾತ, ಮಾರ್ಗದರ್ಶಕ ಗಿರಿಗದ್ದೆ ಮಹಾಲಿಂಗ ಭಟ್ ವಿಧಿವಶರಾಗಿದ್ದಾರೆ. ಮಹಾಲಿಂಗ ಭಟ್ (67) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರು ಚಾರಣಿಗರ ಪಾಲಿಗೆ ಗಿರಿಗದ್ದೆ ಭಟ್ಟರೆಂದೇ ಚಿರಪರಿಚಿತರಾಗಿದ್ದರು.
ಕುಮಾರಪರ್ವತ ದಾರಿಯ ಗಿರಿಗದ್ದೆಯಲ್ಲಿ ಮನೆ ಹೊಂದಿದ್ದ ಮಹಾಲಿಂಗ ಭಟ್ ಅವರು ಗಿರಿಗದ್ದೆ ಭಟ್ಟರು ಎಂದೇ ಖ್ಯಾತರಾಗಿದ್ದರು. ಇವರು ಕುಮಾರಪರ್ವತ ಚಾರಣಿಗರಿಗೆ ಉಪಚಾರ, ಮಾರ್ಗದರ್ಶನ, ಆಹಾರ ತಯಾರಿಸಿ ನೀಡುವ, ಆಶ್ರಯ ನೀಡುವ ಮೂಲಕ ಚಿರಪರಿಚಿತರಾಗಿದ್ದು, ಚಾರಣಿಗರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು
ಕುಮಾರಪರ್ವತ ಚಾರಣಕ್ಕೆ ತೆರಳುವ ಹೆಚ್ಚಿನವರು ಇವರನ್ನು ಸಂಪರ್ಕಿಸಿಯೇ ಆಗಮಿಸುತ್ತಿದ್ದರು. ಮಹಾಲಿಂಗ ಭಟ್ ಅವರ ಮನೆಗೆ ಆಹಾರ ಸಾಮಾಗ್ರಿಗಳನ್ನು ಹಾಗೂ ಮತ್ತಿತರ ಸಾಮಾಗ್ರಿಗಳನ್ನು ಸುಬ್ರಮಣ್ಯದಿಂದ ಹೊತ್ತುಕೊಂಡೇ ಸಾಗಬೇಕಾಗಿತ್ತು. ಮಹಾಲಿಂಗ ಭಟ್ ಅವರು ಗಿರಿಗದ್ದೆಯಲ್ಲಿ ಕೃಷಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಇವರ ನಿಧನದ ಸುದ್ದಿ ಚಾರಣಿಗರಲ್ಲಿ ಬೇಸರ ಮೂಡಿಸಿದೆ.