ಮಂಗಳೂರು: ಇದೀಗ ಎಲ್ಲೆಡೆ ತ್ಯಾಜ್ಯ ವಿಲೇವಾರಿಯದ್ದೇ ಸಮಸ್ಯೆ. ಒಂದು ದಿನ ತ್ಯಾಜ್ಯ ವಿಲೇವಾರಿಯ ವಾಹನ ಬಾರದಿದ್ದಲ್ಲಿ ಕಸದ ನಿರ್ವಹಣೆಯ ಸಮಸ್ಯೆ ತಲೆದೋರುತ್ತದೆ. ಅಂತಹ ಸಮಸ್ಯೆ ಮಂಗಳೂರಿನ ಬೋಳೂರು ವಾರ್ಡ್ ನಲ್ಲಿ ತಲೆದೋರಿತ್ತು. ಈ ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಕಾರ್ಪೊರೇಟರ್ ಸ್ವತಃ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕುಳಿತು ಸಮಸ್ಯೆ ಪರಿಹರಿಸಿರುವ ಘಟನೆ ನಡೆದಿದೆ.
ಕಳೆದ ಮೂರ್ನಾಲ್ಕು ದಿನಗಳಲ್ಲಿ ಬೋಳೂರು ವಾರ್ಡ್ ನಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ಸಮಸ್ಯೆ ತಲೆದೋರಿತ್ತು. ಸರಿಯಾದ ವಾಹನ ವ್ಯವಸ್ಥೆಗಳಿಲ್ಲದೆ ತೊಂದರೆ ಸಂಭವಿಸಿತ್ತು. ಪರಿಣಾಮ ಕಾರ್ಪೊರೇಟರ್ ಜಗದೀಶ್ ಶೆಟ್ಟಿಯವರಿಗೆ ವಾರ್ಡ್ ನ ಜನರಿಂದ ಫೋನ್ ಕರೆಗಳು ಬರುತ್ತಿತ್ತು. ತಕ್ಷಣ ಸ್ಪಂದಿಸಿದ ಕಾರ್ಪೊರೇಟರ್ ಜಗದೀಶ್ ಶೆಟ್ಟಿಯವರು ಸ್ವತಃ ಕಸ ವಿಲೇವಾರಿ ವಾಹನದಲ್ಲಿಯೇ ಕುಳಿತು ಸಮಸ್ಯೆ ಪರಿಹಾರ ಮಾಡಿದ್ದಾರೆ.
ಈ ಸಂದರ್ಭ ತ್ಯಾಜ್ಯ ವಿಲೇವಾರಿ ಮಾಡಲು ಸರಿಯಾದ ವಾಹನ ವ್ಯವಸ್ಥೆ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾರ್ಪೊರೇಟರ್ ತಾವೇ ಸ್ವತಃ ಕಸ ವಿಲೇವಾರಿ ವಾಹನದಲ್ಲಿ ಕುಳಿತು ವಾರ್ಡ್ ಸಂಚಾರ ಮಾಡಿ ತ್ಯಾಜ್ಯ ನಿರ್ವಹಣೆಯನ್ನು ಮಾಡಿದರು. ಇದೀಗ ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ಇವರ ಸ್ಪಂದನೆಗೆ ಅಭಿನಂದನೆ ಸಲ್ಲಿಸಿದ್ದಾರೆ.