ಮಹಾರಾಷ್ಟ್ರ : ನಾಳೆ ಗಣೇಶ ಹಬ್ಬ. ಆದರೆ ಎಲ್ಲೂ ಹಬ್ಬದ ಸಂಭ್ರಮ ಕಾಣಿಸುತ್ತಿಲ್ಲ. ಪ್ರತಿ ವರ್ಷ ಗಣೇಶ ಹಬ್ಬ ಬಂದ್ರೆ ಸಾಕು ಹೆಜ್ಜೆಗೊಂದರಂತೆ ಅಲ್ಲಲ್ಲಿ ಜನ ಗಣೇಶನನ್ನು ಕೂರಿಸಿ ಹಬ್ಬ ಆಚರಿಸುತ್ತಿದ್ದರು. ಆದ್ರೆ ಈ ಬಾರಿ ಮಾತ್ರ ಎಲ್ಲಿ ನೋಡಿದ್ರೂ ಹಬ್ಬದ ಕಳೆಯಿಲ್ಲ. ನಿಜಕ್ಕೂ ನಾಳೇನೇ ಹಬ್ಬಾನಾ ಅಂತಾ ಯೋಚಿಸುವಂತೆ ಮಾಡಿದೆ ಹೆಮ್ಮಾರಿ ಕೊರೊನಾ. ಕೊರೊನಾದಿಂದಾಗಿ ಈ ವರ್ಷ ಯಾವ ಹಬ್ಬವೂ ಇಲ್ಲ ಸಂಭ್ರಮವೂ ಇಲ್ಲ.
ಇನ್ನು ಈ ಬಾರಿ ಹೇಗೆ ಗಣೇಶ ಹಬ್ಬವನ್ನು ಆಚರಿಸಿಬೇಕು ಅನ್ನೋ ಬಗ್ಗೆ ಈಗಾಗಲೇ ಸರ್ಕಾರ ಕೂಡ ಮಾರ್ಗಸೂಚಿಯನ್ನು ಹೊರಡಿಸಿದೆ. ಪಿಓಪಿ ಗಣೇಶ ಬಳಕೆ ಮಾಡಬಾರದು ಬರೀ ಪರಿಸರ ಸ್ನೇಹಿ ಗಣೇಶನನ್ನೇ ಬಳಸಿ ಅಂತಾಲೂ ಹೇಳಿದೆ. ಏನೇ ಮಾಡಿದ್ರು ಈ ಹಿಂದಿನ ವರ್ಷಗಳ ಗಣೇಶ ಹಬ್ಬಕ್ಕೂ ಈ ವರ್ಷದ ಗಣೇಶ ಹಬ್ಬಕ್ಕೂ ಅಜಗಜಾಂತರ ವ್ಯತ್ಯಾಸ.
ಹೀಗೆ ಕೆಲವರು ಗಣೇಶ ಹಬ್ಬ ಆಚರಣೆ ಮಾಡೋಕೆ ಆಗ್ತಿಲ್ಲವಲ್ಲ ಅಂತಾ ಚಿಂತೆ ಮಾಡ್ತಿದ್ರೆ ಇಲ್ಲೊಂದು ಕಲಾವಿದರ ತಂಡ ಮಾತ್ರ ಹಳ್ಳಿಯಲ್ಲಿದ್ದುಕೊಂಡು ಗಣೇಶನ ಮೂಲಕ ದಿಲ್ಲಿಯವರೆಗೂ ಸದ್ದು ಮಾಡಿದ್ದಾರೆ. ಅದು ಹೇಗಪ್ಪಾ ಅಂದ್ರೆ ಗ್ರೀನ್ ಗಣೇಶನ ಮೂಲಕ. ಹಾಗಂಥ ಮಣ್ಣಿನಲ್ಲಿ ಗಣೇಶನನ್ನು ಇವರು ನಿರ್ಮಿಸಿಲ್ಲ. ಬದಲಾಗಿ ಹೊಲದಲ್ಲೇ ಹಸಿರು ಗಣೇಶನನ್ನು ನಿರ್ಮಿಸಿದ್ದಾರೆ.
ಮಹಾರಾಷ್ಟ್ರದ ಸೋಲಾಪುರದ ಬಾಲೆ ಎಂಬ ಗ್ರಾಮದಲ್ಲಿ ಸುಮಾರು 7 ಜನ ಯುವ ಕಲಾವಿದರು ಹಲವು ದಿನಗಳ ಕಾಲ ಪರಿಶ್ರಮಪಟ್ಟು, ಸುಮಾರು ಅರ್ಧ ಎಕರೆ ಹೊಲದಲ್ಲಿ ಹಸಿರಿನಿಂದಲೇ ಈ ಕಲಾಕೃತಿಯನ್ನ ನಿರ್ಮಿಸಿದ್ದಾರೆ. ಗಣೇಶನ ಆಕೃತಿಗೆ ತಕ್ಕಂತೆ ಹಸಿರನ್ನ ಬೆಳೆಸಿ, ನೋಡುಗರ ಮನಸ್ಸಿನಲ್ಲಿ ಗಣೇಶನ ಮೂರ್ತಿ ಅಚ್ಚಾಗುವಂತೆ ಗಣಪನನ್ನ ತಯಾರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಗಣಪನನ್ನ ಕೆಲವು ಮೀಟರ್ ನಷ್ಟು ಎತ್ತರದಿಂದಲೇ ನೋಡಬೇಕು, ಹಾಗೆ ನೋಡಿದರೆ ಮಾತ್ರ ಗಣೇಶನ ಆಕೃತಿ ಸ್ಪಷ್ಟವಾಗಿ ಕಾಣಿಸುತ್ತೆ. ಹೀಗೆ ಎತ್ತರದಿಂದ ಗಣೇಶನನ್ನ ನೋಡಲು ಡ್ರೋನ್ ಸಹಾಯ ಬೇಕೇಬೇಕು.
ತಾವು ನಿರ್ಮಿಸಿರುವ ಹಸಿರು ಗಣೇಶನ ಮೂರ್ತಿಯ ಮುಂದೆ ನಿಂತು ಡ್ರೋನ್ ನಲ್ಲಿ ದೃಶ್ಯ ಸೆರೆಹಿಡಿದುಕೊಂಡಿರುವ ಯುವ ಕಲಾವಿದರು, ಆ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಹಸಿರು ಗಣೇಶನನ್ನ ನೋಡಿದ ಜನರು ಮನಸಾರೆ ಹಾಡಿ ಹೊಗಳುತ್ತಿದ್ದಾರೆ.