ಚಿಕ್ಕಮಗಳೂರು : ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್ ನ ನಡು ರಸ್ತೆ ಹಾಗೂ ಅರಣ್ಯ ಪ್ರದೇಶದಲ್ಲಿ ಪ್ರಿ ವೆಡ್ಡಿಂಗ್ ವಿಡಿಯೋ ಶೂಟ್ ಮಾಡುತ್ತಿರುವುದು ಮಂಗಳವಾರ ಕಂಡು ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸದಾ ವಾಹನಗಳ ಓಡಾಟ ಇರುವ ಹಾಗೂ ಕಡಿದಾದ ತಿರುವಿನಿಂದ ಕೂಡಿರುವ ಚಾರ್ಮಾಡಿ ಘಾಟ್ ನ ಹೆದ್ದಾರಿ ಹಾಗೂ ಆಸುಪಾಸಿನ ಅರಣ್ಯ ಪ್ರದೇಶದಲ್ಲಿ ಹಾಸನ ಮೂಲದ ನವಜೋಡಿಯೊಂದು ಫೋಟೋ ಶೂಟ್ ನಲ್ಲಿ ತೊಡಗಿತ್ತು.
ನಾನಾ ಭಂಗಿಗಳಲ್ಲಿ ರಸ್ತೆ ಮಧ್ಯೆ ಪ್ರಿ ವೆಡ್ಡಿಂಗ್ ಚಿತ್ರೀಕರಣ ಮಾಡುತ್ತಿದ್ದರಿಂದ ರಸ್ತೆಯಲ್ಲಿ ಬರುವ ವಾಹನ ಸವಾರರು ತಿರುವಿನಲ್ಲಿ ಅಚಾನಕ್ಕಾಗಿ ರಸ್ತೆಯ ಮಧ್ಯದಲ್ಲಿ ಎದುರಾಗುವ ಜನರನ್ನು ನೋಡಿ ಗಾಬರಿಗೊಂಡು ವಾಹನ ನಿಲ್ಲಿಸುತ್ತಿದ್ದ ದೃಶ್ಯ ಕಂಡುಬಂತು.
ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಚಾರ್ಮಾಡಿ ಘಾಟ್ ನಲ್ಲಿ ಫೋಟೋ ತೆಗೆಯದಂತೆ ಸೂಚನಾ ಫಲಕ ಹಾಕಿದ್ದರೂ ಕೂಡಾ, ಕೆಲ ಪ್ರವಾಸಿಗರು ಫೋಟೋ, ವೀಡಿಯೋ ತೆಗೆಯುತ್ತಿರುವುದು ಹೆಚ್ಚುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಅಂತಹವರಿಗೆ ದಂಡ ವಿಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.