ಪುತ್ತೂರು: ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದಲ್ಲಿ ಎಸ್.ಡಿ.ಪಿ.ಐ ಪಕ್ಷದ ಪುತ್ತೂರು ನಗರದ ಮಾಜಿ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪುತ್ತೂರು ಪ್ರಧಾನ ಸಿವಿಲ್ ನ್ಯಾಯಾಲಯ ಹಿರಿಯ ವಿಭಾಗ ಮತ್ತು ಎ.ಸಿ.ಜೆ.ಎಂ ನ್ಯಾಯಾಧೀಶರು ಪುತ್ತೂರು ನಗರ ಪೊಲೀಸ್ ಠಾಣೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಬನ್ನೂರು ನಿವಾಸಿ ಬಿ ಮಹಮ್ಮದ್ ಹನೀಫ್ ಎಂಬವರು ನ್ಯಾಯಾಲಯಕ್ಕೆ ದೂರು ನೀಡಿದ್ದು, ಆರೋಪಿಯನ್ನ ಎಸ್.ಡಿ.ಪಿ.ಐ ಪಕ್ಷದ ಪುತ್ತೂರು ನಗರದ ಮಾಜಿ ಅಧ್ಯಕ್ಷ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಪೈಸಾರಿ ನಿವಾಸಿ ಅಬ್ದುಲ್ ಬಶೀರ್ ಇಬ್ರಾಹಿಂ ಎನ್ನಲಾಗಿದೆ.
ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಕೊಡುವುದಾಗಿ ಹೇಳಿ ಸುಮಾರು ರೂ.೩೮,೫೦,೦೦೦ ಹಣ ಪಡೆದುಕೊಂಡು ಇಬ್ರಾಹಿಂರವರು ಯಾವುದೇ ಲಾಭಾಂಶವು ನೀಡದೆ ಸಂಪರ್ಕಕ್ಕೂ ಸಿಗದೇ ವಂಚಿಸಿದ್ದಾರೆ ಎಂದು ಹನೀಫ್ ಅವರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿ ಅಬ್ದುಲ್ ಬಶೀರ್ ಇಬ್ರಾಹಿಮ್ ಅವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮಾಡಲು ಪುತ್ತೂರು ಪೊಲೀಸ್ ಠಾಣೆಗೆ ಆದೇಶ ನೀಡಿದೆ.