Thursday, May 16, 2024
Homeತಾಜಾ ಸುದ್ದಿಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸೊಸೆಯಿಂದ ದೂರು: ಎಲ್ಲರ ಕಣ್ಣೆದುರೇ ಉತ್ತರಾಖಂಡದ ಮಾಜಿ ಸಚಿವ...

ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸೊಸೆಯಿಂದ ದೂರು: ಎಲ್ಲರ ಕಣ್ಣೆದುರೇ ಉತ್ತರಾಖಂಡದ ಮಾಜಿ ಸಚಿವ ಆತ್ಮಹತ್ಯೆ

spot_img
- Advertisement -
- Advertisement -

ಹೊಸದಿಲ್ಲಿ: ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ತಮ್ಮ ವಿರುದ್ಧ ಸೊಸೆ ದೂರು ನೀಡಿದ ಮೂರು ದಿನಗಳ ಬಳಿಕ ಉತ್ತರಾಖಂಡದ ರಾಜಕಾರಣಿ ರಾಜೇಂದ್ರ ಬಹುಗುಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ನೀರಿನ ಟ್ಯಾಂಕ್ ಮೇಲೆ ಹತ್ತಿದ್ದ ರಾಜೇಂದ್ರ, ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.

ಹಲ್ದವಾನಿಯಲ್ಲಿನ ಮನೆಯಿಂದ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿದ್ದ 59 ವರ್ಷದ ಬಹುಗುಣ, ತಾವು ಆತ್ಮಹತ್ಯೆಗೆ ಯೋಚಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಪೊಲೀಸರು ಅವರ ಮನೆಯತ್ತ ಧಾವಿಸಿದ್ದರು. ಆದರೆ ಪೊಲೀಸರು ಬಂದ ಬಳಿಕ, ಅಕ್ಕಪಕ್ಕದ ಮನೆಯವರು ಹಾಗೂ ಇತರರ ಕಣ್ಣೆದುರೇ ಅವರು ತಮಗೆ ತಾವು ಗುಂಡು ಹಾರಿಸಿಕೊಂಡಿದ್ದಾರೆ. ಈ ಭಯಾನಕ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ರಾಜೇಂದ್ರ ಬಹುಗುಣ ಅವರು ಸೊಸೆ ಮಾಡಿದ್ದ ಆರೋಪದಿಂದ ತೀವ್ರ ಬೇಸರಗೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಪಂಕಜ್ ಭಟ್ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿದಾಗ, ಬಹುಗುಣ ಅವರು ಟ್ಯಾಂಕ್ ಮೇಲೆ ಹತ್ತಿ ನಿಂತಿದ್ದರು. ಗುಂಡು ಹಾರಿಸಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದರು. ಅವರ ಜತೆ ಲೌಡ್‌ಸ್ಪೀಕರ್ ಸಹಾಯದಿಂದ ಪೊಲೀಸರು ಮಾತನಾಡಲು ಪ್ರಯತ್ನಿಸಿದರು. ಆದರೆ, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಅವರು ಪದೇ ಪದೇ ಹೇಳುತ್ತಿದ್ದರು. ಒಂದು ಹಂತದಲ್ಲಿ ಅವರು ತಮ್ಮ ನಿರ್ಧಾರ ಕೈಬಿಟ್ಟು, ಕೆಳಕ್ಕೆ ಇಳಿಯುವ ಸೂಚನೆ ನೀಡಿದ್ದರು. ಆದರೆ, ಹಠಾತ್ತನೆ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಸೊಸೆ ನೀಡಿದ್ದ ದೂರಿನ ಅನ್ವಯ ಬಹುಗುಣ ವಿರುದ್ಧ ಕಠಿಣವಾದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಬಹುಗುಣ ಅವರ ಮೇಲೆ ದೌರ್ಜನ್ಯದ ಆರೋಪ ಮಾಡಿದ್ದ ಸೊಸೆ, ತಂದೆ ಹಾಗೂ ಪಕ್ಕದ ಮನೆಯ ಒಬ್ಬರ ಮೇಲೆ ವಿರುದ್ಧ ಆತ್ಮಹತ್ಯೆಗೆ ಕಾರಣವಾದ ಆರೋಪ ದಾಖಲಿಸಲಾಗಿದೆ. ಬಹುಗುಣ ಅವರ ಮಗ ಅಜಯ್ ಬಹುಗುಣ ಈ ಮೂವರ ವಿರುದ್ಧ ದೂರು ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದ ಬಹುಗುಣ, 2004-05ನೇ ಸಾಲಿನಲ್ಲಿ ಎನ್‌ಡಿ ತಿವಾರಿ ಅವರ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರ ಮಾನ್ಯತೆ ಪಡೆದಿದ್ದರು. ರೋಡ್‌ವೇಸ್ ಒಕ್ಕೂಟದ ನಾಯಕರಾಗಿದ್ದ ಅವರು, ಹಲ್ದವಾನಿ ಡಿಪೋ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಕ್ಟೋಬರ್ 31ರಂದು ನಿವೃತ್ತರಾಗಿದ್ದರು.

ಸೊಸೆ ತಮ್ಮ ವಿರುದ್ಧ ದೂರು ನೀಡಿದ ಬಳಿಕ ಅವರು ಆಘಾತಕ್ಕೆ ಮತ್ತು ಖಿನ್ನತೆಗೆ ಒಳಗಾಗಿದ್ದರು. ಪಕ್ಕದ ಮನೆಯಾಕೆಯೊಬ್ಬರು ಬಹುಗುಣ ಅವರು ತಮ್ಮನ್ನು ನಿಂದಿಸಿ, ಬೆದರಿಸಿದ್ದಲ್ಲದೆ ಅತ್ತೆಯ ಜತೆ ಹೋಗುತ್ತಿದ್ದಾಗ ಹಲ್ಲೆ ನಡೆಸಿದ್ದರು ಎಂದು ಮಂಗಳವಾರ ಮತ್ತೊಂದು ದೂರು ನೀಡಿದ್ದರು. ಬಹುಗುಣ ಅವರ ಸೊಸೆ, ಪತಿ ಜತೆಗೆ ವೈವಾಹಿಕ ಮನಸ್ತಾಪ ಹೊಂದಿದ್ದರು. ಅದೇ ಮನೆಯ ಬೇರೆ ಮಹಡಿಯಲ್ಲಿ ಪತಿಯಿಂದ ಬೇರೆಯಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!