ಕಲಬುರಗಿ: ಶಹಬಾದ ತಾಲೂಕಿನ ಮರತೂರ ಗ್ರಾಮದ ಮಂಜುನಾಥ್ ಅಲಿಯಾಸ್ ಮನೋಜ್ ಸಿಂದೆ (32) ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಮನೋಜ್ ಅವರ ಪತ್ನಿಯ ಅಣ್ಣ ಮತ್ತು ಆತನ ಪತ್ನಿಯ ನಡುವೆ ಕೌಟುಂಬಿಕ ಕಲಹವಿದ್ದು, ಈ ನಡುವೆ ಅಣ್ಣನ ಮಗು ಕೂಡಾ ಕಾಣೆಯಾಗಿತ್ತು. ಮಗು ಕಾಣೆಯಾಗಲು ನೀವೇ ಕಾರಣ ಅಂತ ಮನೋಜ್ ಪತ್ನಿಯ ಅಣ್ಣ ಮನೋಜ್ ಹಾಗೂ ಅವರ ಪತ್ನಿ ಹೆಸರಿನಲ್ಲಿ ಠಾಣೆಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆ ಆತನನ್ನು ಠಾಣೆಗೆ ಎಳೆದೊಯ್ದ ಪೊಲೀಸರು, ಎರಡು ದಿನ ಠಾಣೆಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ವ್ಯಕ್ತಿಯು ಮಗುವಿನ ನಾಪತ್ತೆಯಲ್ಲಿ ನಮ್ಮ ಕೈವಾಡ ಇಲ್ಲ ಎಂದು ಹೇಳಿದರೂ ಕೇಳದ ಪೊಲೀಸರು ಇವತ್ತು ನಿನ್ನನ್ನು ಮಾತ್ರ ಎಳೆದು ತಂದಿದ್ದೇವೆ. ನಾಳೆ ನಿನ್ನ ಹೆಂಡತಿಯನ್ನೂ ಕೂಡ ಎಳೆದು ತರುತ್ತೇವೆ ಅಂತ ಅವಾಜ್ ಹಾಕಿದ್ದಾರೆ. ಪೊಲೀಸರ ದೌರ್ಜನ್ಯ, ಹೊಡೆತದಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ ಮನೋಜ್ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಡೆತ್ನೋಟ್ನಲ್ಲಿ, ವಿನಾಕಾರಣ ನನ್ನ ಹಾಗೂ ನನ್ನ ಹೆಂಡತಿ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿ ಮರ್ಯಾದೆ ಹರಾಜು ಮಾಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಹಾಗೂ ಸಾಯಬಣ್ಣಾ ಜೋಗುರ, ಶರಣಮ್ಮ ನಾಟೀಕರ್, ಪ್ರತಿಭಾ ನಾಗೇಶ್ ಮತ್ತು ಪ್ರತಿಭಾಳ ತಾಯಿ ಸೇರಿದಂತೆ ನಾಲ್ಕು ಜನರ ಹೆಸರುಗಳನ್ನು ಬರೆದಿದ್ದಾರೆ.
ಮನೋಜ್ ಕುಟುಂಬಸ್ಥರು ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಮನೋಜ್ ಶವವನ್ನು ಶಹಬಾದ್ ಪೊಲೀಸ್ ಠಾಣೆ ಎದುರಿಗಿಟ್ಟು ಗ್ರಾಮಸ್ಥರು ಸೇರಿದಂತೆ ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.