ಬೆಂಗಳೂರು: ಬಹುಕೋಟಿ ಲಂಚದ ಆರೋಪ ಮುಕ್ತವಾಗುವವರೆಗೆ ರೈತ ಸಂಘದ ನಾಯಕ ಎಂದು ಹೇಳಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಶಾಲು ಹಾಕದೇ ರೈತ ಸಂಘಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ಹೊರಗಿರಬೇಕು. ಇಲ್ಲದಿದ್ದರೆ ಅವರ ಎಲ್ಲ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವರ್ಷ ನಡೆದ ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯುವ ಸಲುವಾಗಿ 35 ಕೋಟಿ ರೂ. ಲಂಚ ಪಡೆದು ನೌಕರರಿಗೆ ಮತ್ತು ರೈತ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ. ಅದೇ ರೀತಿ ಬೆಂಗಳೂರು ಸಿಟಿ ಮಾರುಕಟ್ಟೆಯ ಸೊಪ್ಪಿನ ಹೋರಾಟದಿಂದ ತಿಂಗಳಿಗೆ 60 ಸಾವಿರ ರೂ. ಪಡೆಯುತ್ತಿದ್ದು, ದಾಖಲೆ ಸಮೇತ ರೈತರು ಬಹಿರಂಗಪಡಿಸಿದ್ದಾರೆ. ಹೀಗಾಗಿ ಇಂಥವರು ರೈತರ ಹೆಸರು ಹೇಳುವುದಕ್ಕೂ ಯೋಗ್ಯರಲ್ಲ ಎಂದು ಕಿಡಿಕಾರಿದರು.
ಕೇವಲ ಲಂಚಕ್ಕಾಗಿ ಮಾತ್ರ ಹೋರಾಟಗಳನ್ನು ಮಾಡುವ ಕೋಡಿಹಳ್ಳಿ ಚಂದ್ರಶೇಖರ್ ಸಾವಿರಾರು ಸಾರಿಗೆ ನೌಕರರು ಬೀದಿಗೆ ಬೀಳುವಂತೆ ಮಾಡಿದ್ದಲ್ಲದೆ ಓರ್ವ ನೌಕರನನ್ನು ಅಮಾನುಷವಾಗಿ ಬಲಿಪಡೆದುಕೊಂಡಿದ್ದಾರೆ. ನಾಲ್ಕು ನಿಗಮದಲ್ಲಿ ಸುಮಾರು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಆರಂಭದಲ್ಲಿ ರಸ್ತೆ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷನಾಗಿ ನೇತೃತ್ವ ವಹಿಸಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ. ಸಾರಿಗೆ ನೌಕರರಿಗೂ ರೈತ ಮುಖಂಡ ಎನಿಸಿಕೊಂಡಿರುವ ಕೋಡಿಹಳ್ಳಿಗೂ ಯಾವುದೇ ಸಂಬಂಧ ಇಲ್ಲ. ಆದರೂ ಹಣಕ್ಕಾಗಿ ಹೋರಾಟದ ನೇತೃತ್ವವನ್ನು ವಹಿಸಿದ್ದ ಎಂದು ಕಿಡಿಕಾರಿದರು. ರೈತ ಸಂಘದ ಮುಂಚೂಣಿ ನಾಯಕನಾಗಿಕೊಂಡು ರೈತ ಸಮುದಾಯಕ್ಕೆ ಹಸಿರು ಶಾಲುಗಳಿಗೆ ಅವಮಾನ ಮಾಡಿರುವ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಬ್ಬಣಿ ಶಿವಪ್ಪ ಆಗ್ರಹಿಸಿದರು.
ಕಳೆದ 2021ರ ಏಪ್ರಿಲ್ನಲ್ಲಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ವಿವಿಧ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ಹೂಡಿದ್ದರು. ಇದರ ನೇತೃತ್ವವನ್ನು ಕೋಡಿಹಳ್ಳಿ ಚಂದ್ರಶೇಖರ್ ವಹಿಸಿಕೊಂಡಿದ್ದರು. ಆದರೆ, ಈಗ ಮುಷ್ಕರ ನಿಲ್ಲಿಸಲು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ 35 ಕೋಟಿ ರೂ. ಕಿಕ್ ಬ್ಯಾಕ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರಿಗೆ ಇಲಾಖೆಯ ನೌಕರರು ಈ ವಿಚಾರವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.