ರಾಜ್ಯದಲ್ಲಿನ ವಿವಿಧ ಜಿಲ್ಲೆಗಳ ರೈತರ ಜಮೀನನ್ನು ವಕ್ಫ್ ಬೋರ್ಡ್ ಆಕ್ರಮಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಪಕ್ಷವು ಆರೋಪಿಸಿರುವ ಬೆನ್ನಲೇ ಬೊಮ್ಮಾಯಿ ವೀಡಿಯೋ ವೈರಲಾಗಿದೆ.
ಬಸವರಾಜ ಬೊಮ್ಮಾಯಿ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ವಕ್ಫ್ ಆಸ್ತಿ ವಿಚಾರದಲ್ಲಿ ಮುಸ್ಲಿಂ ಮುಖಂಡರಿಗೆ ಅವರು ಕಿವಿಮಾತು ಹೇಳಿದ, ‘ವಕ್ಫ್ ಆಸ್ತಿ ಅಲ್ಲಾಹನದ್ದು. ವಕ್ಫ್ ಆಸ್ತಿಗಳನ್ನು ವಕ್ಫ್ ಬೋರ್ಡ್ ವಶಪಡಿಸಿಕೊಳ್ಳಬೇಕು ಅದರ ವಿಚಾರದಲ್ಲಿ ಕಾಂಪ್ರಮೈಸ್ ಆಗಬಾರದು ’ ಎನ್ನುವ ವಿಡಿಯೋ ವೈರಲ್ ಆಗಿದ್ದು, ಇದೀಗ ಬಿಜೆಪಿಗೆ ಅದೇ ತಿರುಗುಬಾಣವಾಗಿದೆ. ಬಿಜೆಪಿ ಯಾವ ರೀತಿಯ ರಾಜಕೀಯ ಮಾಡುತ್ತಿದೆ ಎಂದು ಜನ ಪ್ರಶ್ನಿಸುವಂತಾಗಿದೆ.
ಬೆಂಗಳೂರಿನಲ್ಲಿ 2022ರಲ್ಲಿ ಕೆಎಂಡಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ, “ಖುದಾನ ಜಮೀನನ್ನು ಲೂಟಿ ಮಾಡುತ್ತಿರಬೇಕಾದರೆ ನೀವೆಲ್ಲ ಕಣ್ಣು ಮುಚ್ಚಿ ಕುಳಿತರೆ, ಲೂಟಿ ಮಾಡುವವನಿಗಿಂತ ಲೂಟಿ ಮಾಡಲು ಬಿಟ್ಟವರೇ ದೊಡ್ಡ ಮುಜ್ರಿಂ(ತಪ್ಪಿತಸ್ಥ) ಆಗುತ್ತಾರೆ. ಖುದಾನ ಜಮೀನುಗಳನ್ನು ರಕ್ಷಿಸುವ ಅವಕಾಶ ಲಭಿಸಿರುವ ನೀವು ಪುಣ್ಯವಂತರು. ಊಪರ್ವಾಲಾ(ಮೇಲಿನವನು) ನೋಡುತ್ತಿದ್ದಾನೆ.” ಎಂದು ಹೇಳಿದ್ದರು.
“ಕರ್ನಾಟಕದಲ್ಲಿ ಸುಮಾರು 2,000 ಕೋಟಿ ವಕ್ಫ್ ಆಸ್ತಿಯನ್ನು ಈಗಾಗಲೇ ಖಾಸಗಿಯವರು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲಿ ಇಲ್ಲಿ ಅಲ್ಪಸ್ವಲ್ಪ ಜಮೀನು ಒಳಗೆ ಹಾಕಿದ್ದರೆ ಬೇರೆ ವಿಷಯ. ಸಂಪೂರ್ಣ ಆಸ್ತಿಗಳನ್ನೇ ಖಾಸಗಿಯವರು ಒಳಗೆ ಹಾಕಿಕೊಂಡಿದ್ದಾರೆ. ಇನ್ನೀಗ ಆಸ್ತಿಯ ಒಂದು ಮೂಲೆಯಲ್ಲಿ ನಾವು ಮಸೀದಿ ಕಟ್ಟುತ್ತೇವೆ ಎಂದರೆ ಅವರು ನಿಮಗೆ ಅವಕಾಶ ಕೊಡುತ್ತಾರಾ? ಆದ್ದರಿಂದ ಖಾಸಗಿಯವರು ವಶಪಡಿಸಿಕೊಂಡಿರುವ ವಕ್ಫ್ನ ಎಷ್ಟು ಆಸ್ತಿಗಳಿವೆಯೋ ಅದೆಲ್ಲವೂ ಮತ್ತೆ ವಕ್ಫ್ ಬೋರ್ಡಿಗೆ ಬರುವವರೆಗೂ ನೀವೆಲ್ಲ ಸುಮ್ಮನೆ ಕೂರಬಾರದು. ನಿಮ್ಮ ಜೊತೆಗೆ ನಾವಿದ್ದೇವೆ” ಎಂದು ಬೊಮ್ಮಾಯಿ ಅಬ್ಬರದ ಭಾಷಣ ಮಾಡಿದ್ದರು ಎನ್ನಲಾಗಿದೆ.
ಬೊಮ್ಮಾಯಿ ಭಾಷಣ ಮಾಡುವ ವೇಳೆ, ಅದೇ ವೇದಿಕೆಯಲ್ಲಿ ಬಿಜೆಪಿ ಸಂಸದ ಪಿ.ಸಿ ಮೋಹನ್, ಬಿಜೆಪಿ ನಾಯಕ ರಾಜು ಗೌಡ, ಆಗಿನ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಶಾಫಿ ಸಅದಿ ಸೇರಿದಂತೆ ಹಲವರು ಇದ್ದರು ಎನ್ನಲಾಗಿದೆ.