ಮಥುರಾ: ಭಾರತದ ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಮಥುರಾ ಜೈಲಿನಲ್ಲಿ ಮಹಿಳಾ ಕೈದಿಯೊಬ್ಬಳನ್ನ ಗಲ್ಲಿಗೇರಿಸಲು ತಯಾರಿ ನಡೆದಿದೆ. ಶಬ್ನಮ್ ಮತ್ತು ಸಲೀಂ ಎಂಬ ಕೈದಿಗಳನ್ನ ಗಲ್ಲಿಗೇರಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಎತ್ತಿಹಿಡಿದಿತ್ತು. ನಂತರ ಈ ಇಬ್ಬರೂ ರಾಷ್ಟ್ರಪತಿಗಳಿಗೆ ಕ್ಷಮಾದಾನ ನೀಡುವಂತೆ ಪತ್ರ ಬರೆದಿದ್ದರು. ರಾಷ್ಟ್ರಪತಿಗಳು ಇವರ ಕ್ಷಮಾದಾನ ಮನವಿಯನ್ನ ತಿರಸ್ಕರಿಸಿದ್ದರು. ಸದ್ಯ ಶಬ್ನಮ್ ಬರೇಲಿ ಜೈಲಿನಲ್ಲಿದ್ದು, ಸಲೀಂ ಆಗ್ರಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಮಥುರಾ ಜೈಲಿನಲ್ಲಿ 150 ವರ್ಷಗಳ ಹಿಂದೆಯೇ ಮಹಿಳೆಯರನ್ನ ಗಲ್ಲಿಗೇರಿಸುವ ಕೋಣೆಯನ್ನು ನಿರ್ಮಿಸಲಾಗಿದೆ. ಆದರೆ ಸ್ವಾತಂತ್ರ್ಯಾನಂತರ ಈವರೆಗೆ ಯಾವುದೇ ಮಹಿಳೆಯನ್ನ ಗಲ್ಲಿಗೇರಿಸಿಲ್ಲ. ಮಥುರಾ ಜೈಲಿನ ಹಿರಿಯ ಜೈಲ್ ಸೂಪರಿಂಟೆಂಡೆಂಟ್ ಪ್ರಕಾರ ಈ ಇಬ್ಬರನ್ನ ಗಲ್ಲಿಗೇರಿಸುವ ದಿನಾಂಕ ನಿಗದಿಯಾಗಿಲ್ಲ. ಆದರೆ ಈಗಾಗಲೇ ಜೈಲು ಆಡಳಿತದಿಂದ ಗಲ್ಲಿಗೇರಿಸುವ ಹಗ್ಗಕ್ಕಾಗಿ ಆರ್ಡರ್ ಮಾಡಲಾಗಿದೆ. ಈ ಇಬ್ಬರೂ ಕೈದಿಗಳಿಗೆ ಡೆತ್ ವಾರೆಂಟ್ ನೀಡುತ್ತಿದ್ದಂತೆಯೇ ಗಲ್ಲಿಗೇರಿಸಲಾಗುತ್ತದೆ.
ಏನಿದು ಪ್ರಕರಣ..?
2008ರ ಏಪ್ರಿಲ್ 14 ಮತ್ತು 15 ರಂದು ಉತ್ತರಪ್ರದೇಶದ ಅಮ್ರೊಹ ಜಿಲ್ಲೆಯ ಹಸನ್ಪುರ್ ನಗರದ ಬಳಿಯ ಬವನ್ಖೆಡಿ ಎಂಬ ಸಣ್ಣ ಗ್ರಾಮದಲ್ಲಿ ಒಂದೇ ಕುಟುಂಬದ 7 ಮಂದಿಯ ಹತ್ಯೆ ನಡೆದಿತ್ತು. ಶಬ್ನಂ ಮತ್ತು ಆಕೆಯ ಪ್ರಿಯಕರ ಸಲೀಂ ಸೇರಿ ಶಬ್ನಂಳ ತಂದೆ ಶೌಕತ್, ತಾಯಿ ಹಷ್ಮಿ, ಸಹೋದರರಾದ ಅನೀಸ್, ರಶೀದ್, ಅತ್ತಿಗೆ ಅಂಜುಮ್ ಮತ್ತು ಆಕೆಯ ಸಹೋದರಿ ರಬಿಯಾಳನ್ನ ಕೊಡಲಿಯಿಂದ ಕೊಂದುಹಾಕಿದ್ದರು. ಅಲ್ಲದೇ ಶಬ್ನಮ್ ತನ್ನ ಸಂಬಂಧಿ ಅರ್ಷ್ ಎಂಬವನನ್ನು ಉಸಿರುಗಟ್ಟಿಸಿ ಕೊಂದಿದ್ದಳು. ಇವರೆಲ್ಲರೂ ತನ್ನ ಮತ್ತು ಸಲೀಂ ನಡುವಿನ ಪ್ರೀತಿಗೆ ಅಡ್ಡ ಬರುತ್ತಿದ್ದಾರೆಂಬ ಕಾರಣಕ್ಕೆ ಶಬ್ನಂ ಮತ್ತು ಸಲೀಂ ಈ ಸಾಮೂಹಿಕ ಹತ್ಯೆ ನಡೆಸಿದ್ದರು.
ಈ ಪ್ರಕರಣದ ವಿಚಾರಣೆ ಅಮ್ರೋಹ ಕೋರ್ಟ್ನಲ್ಲಿ 2 ವರ್ಷ 3 ತಿಂಗಳ ಕಾಲ ನಡೆದಿತ್ತು. 2010ರ ಜುಲೈ 15 ರಂದು ಜಿಲ್ಲಾ ಜಡ್ಜ್ ಎಸ್ಎಎ ಹುಸೈನಿ ಶಬ್ನಂ ಮತ್ತು ಸಲೀಂನನ್ನು ಗಲ್ಲಿಗೇರಿಸುವ ಆದೇಶ ಹೊರಡಿಸಿದ್ದರು.
ಶಬ್ನಂ ಮತ್ತು ಸಲೀಂರ ಈ ಪ್ರಕರಣದಲ್ಲಿ ಒಟ್ಟು 100 ಬಾರಿ cross examination ಮಾಡಲಾಗಿತ್ತು. ತೀರ್ಪು ನೀಡುವ ದಿನದಂದು ಜಡ್ಜ್ ಒಟ್ಟು 29 ಸಾಕ್ಷಿದಾರರ ಹೇಳಿಕೆಗಳನ್ನ ಕೇಳಿ 2010ರ ಜುಲೈ 14 ರಂದು ಶಬ್ನಮ್ ಮತ್ತು ಸಲೀಂ ಅಪರಾಧಿಗಳೆಂದು ಘೋಷಿಸಿತ್ತು. ಅದರ ಮಾರನೆ ದಿನ ಜಡ್ಜ್ ಎಸ್ಎಎ ಹುಸೈನಿ ಈ ಇಬ್ಬರನ್ನೂ ಗಲ್ಲಿಗೇರಿಸುವಂತೆ ಆದೇಶ ಹೊರಡಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 29 ಜನರಿಗೆ 649 ಪ್ರಶ್ನೆಗಳನ್ನ ಕೇಳಲಾಗಿತ್ತು. 160 ಪುಟಗಳ ಆದೇಶವನ್ನ ಹೊರಡಿಸಲಾಗಿತ್ತು.