ಪುತ್ತೂರು : ಇಲ್ಲಿನ ಮಹಾಲಿಂಗೇಶ್ವರ ದೇಗುಲದ ಬಳಿ ದೇವಮಾರು ಗದ್ದೆಯ ಸಮೀಪವಿರುವ ಮನೆಯೊಂದು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ದೇವಸ್ಥಾನದ ಗದ್ದೆಯಲ್ಲಿ ಶಿವನ ಮೂರ್ತಿಯಿರುವ ಜಾಗದಿಂದ ಸ್ಮಶಾನಕ್ಕೆ ಹೋಗುವ ದಾರಿಯ ಪಕ್ಕವೇ ಇರುವ ಮನೆ ಬೆಂಕಿಗೆ ಆಹುತಿಯಾಗಿದೆ. ಇಂದು ಮಧ್ಯಾಹ್ನ ಈ ಮಹಾ ಅವಘಡ ನಡೆದಿದೆ.
ಅಂದ್ಹಾಗೆ ಈ ಮನೆಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವ ಗದಗ ಮೂಲದವರು ವಾಸವಾಗಿದ್ದರು. ಈ ಮನೆಯಲ್ಲಿ ವಾಸವಿದ್ದ ಮಕ್ಕಳು ಮಧ್ಯಾಹ್ನ ಪಟಾಕಿ ಸಿಡಿಸಿದ್ದಾರೆ. ಈ ವೇಳೆ ಬೆಂಕಿ ಕಿಡಿ ಹಾರಿ ಅನಾಹುತ ಸಂಭವಿಸಿರಬಹುದು ಅಂತಾ ಹೇಳಲಾಗಿದೆ. ಮತ್ತೊಂದು ಕಡೆ ಶಾರ್ಟ್ ಸರ್ಕ್ಯೂಟ್ ಕೂಡ ಕಾರಣವಿರಬಹುದು ಎನ್ನಲಾಗುತ್ತಿದೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ.
ಇನ್ನು ಬೆಂಕಿ ರಭಸದಿಂದ ಉರಿಯುತ್ತಿದ್ದರೂ ಮನೆಯೊಳಗಿದ್ದವರಿಗೆ ಅರಿವಾಗಿಲ್ಲ. ಸ್ಲಲ್ಪ ಹೊತ್ತಾದ ಬಳಿಕ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇನ್ನು ಯಾವುದೇ ಸಾವು ನೋವುಗಳಾಗಿಲ್ಲ. ಆದರೆ ಮನೆಯೊಳಗಿದ್ದ ಪ್ಲಾಸ್ಟಿಕ್ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಇದು ವೈಜ್ಜುದ್ದಿನ್ ಎಂಬವರಿಗೆ ಸೇರಿದ ಮನೆಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.