ಸವಣೂರು: ಹಣ ತಂದು ಕೊಡುವಂತೆ ವ್ಯಕ್ತಿಯೋರ್ವ ತನ್ನ ಮೊದಲ ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ಅಬ್ದುಲ್ ಕುಂಞ ಎಂದು ಗುರುತಿಸಲಾಗಿದೆ. ಈತನನ್ನು ಹಲ್ಲೆಗೊಳಗಾದ ಮಹಿಳೆ ನಸೀಮಾ ಎನ್ನುವವರು 23 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರು. ಅಬ್ದುಲ್ ಕುಂಞಯವರು ಸುಮಾರು ವರ್ಷಗಳಿಂದ ಅಮಲು ಪದಾರ್ಥ ಸೇವಿಸಿಕೊಂಡು ಬಂದು ನಸೀಮಾರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಇದಲ್ಲದೆ ಮದುವೆಯ ಸಂದರ್ಭದಲ್ಲಿ ಪತ್ನಿಯ ತವರಿನಿಂದ ನೀಡಿದ ಹಣ ಮತ್ತು 40 ಪವನ್ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಲ್ಲದೆ, ಆರೋಪಿ ಅಬ್ದುಲ್ ಕುಂಞಯು ಮೊದಲ ಪತ್ನಿಗೆ ತಿಳಿಯದೇ ಎರಡನೇ ವಿವಾಹ ಕೂಡ ಆಗಿದ್ದನು.
ಇದೀಗ ನಸೀಮಾರ ಹೆಸರಿನಲ್ಲಿರುವ ಮನೆ ಮತ್ತು ಜಮೀನನ್ನು ಮಾರಾಟ ಮಾಡಿ ಅಥವಾ ತವರಿನಿಂದ 12 ಲಕ್ಷ ರೂಪಾಯಿ ತಂದು ನೀಡುವಂತೆ ಪೀಡಿಸಿ ಹಲ್ಲೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ಆಕೆಯ ಅಪ್ರಾಪ್ತ ವಯಸ್ಸಿನ ಮಗಳಿಗೂ ದೈಹಿಕ ಹಲ್ಲೆ ನಡೆಸಿದ್ದಾನೆ.
ಈ ಕುರಿತು ಪಾಲ್ತಾಡಿ ಗ್ರಾಮದ ಅಂಕತ್ತಡ್ಕದ ನಸೀಮ ಎಂಬವರು ಅಬ್ದುಲ್ ಕುಂಞ ಎಂಬವರ ವಿರುದ್ಧ ದೂರು ನೀಡಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.