ಉಡುಪಿ: ಗ್ರಾಮ ಪಂಚಾಯತ್ ವಿಶೇಷ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಿ ತಳ್ಳಾಡಿದ ಘಟನೆ ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.
ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ನಾಯ್ಕ್ ಸುಮಾರು ಐವತ್ತು ಲೋಡ್ ನಷ್ಟು ಕಸವನ್ನು ಹೂತು ಹಾಕಿದ್ದು, ಹೂತಿರುವ ಕಸ ಮೇಲಕ್ಕೆತ್ತಲು ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಕರೆದಿದ್ದ ವಿಶೇಷ ಗ್ರಾಮ ಪಂಚಾಯತ್ ಸಭೆಯನ್ನು ಕೋರಂ ಇಲ್ಲದ ಕಾರಣ ನಡೆಸಲು ಬಿಜೆಪಿ ಸದಸ್ಯರು ವಿರೋಧಿಸಿದ್ದರು. ಈ ವೇಳೆ ವಿಶೇಷ ಸಭೆಯಿಂದ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಸದಸ್ಯರು ಹೊರ ದಬ್ಬಿದ್ದಾರೆ.
ತಳ್ಳಾಟದಲ್ಲಿ ಮಹಿಳಾ ಗ್ರಾಮ ಪಂಚಾಯತ್ ಸದಸ್ಯರಿಗೆ ಗಾಯಗಳಾಗಿದ್ದು, ಸುಮಾರು ಅರ್ಧ ಗಂಟೆಗಳ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮತ್ತು ಪೊಲೀಸರ ಎದುರೇ ಗ್ರಾಮ ಪಂಚಾಯತ್ ಸದಸ್ಯರು ಎಳೆದಾಡಿಕೊಂಡಿದ್ದು,
ಕಾಂಗ್ರೆಸ್ ಸದಸ್ಯರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಬಿಜೆಪಿ ಸದಸ್ಯರು ನಿರ್ಧರಿಸಿದ್ದಾರೆ.


