ಕಾರ್ಕಳ: ಮದ್ಯದ ನಶೆಯಲ್ಲಿ ಗಲಾಟೆಯಾಗಿ ಮಗನನ್ನೇ ಕಬ್ಬಿಣದ ಪೈಪ್ ನಿಂದ ಹೊಡೆದು ತಂದೆ ಕೊಲ ಮಾಡಿರುವ ಘಟನೆ ಕಾರ್ಕಳದ ಹೆಬ್ರಿಯ ವರಂಗ ಗ್ರಾಮದ ಮೂಡುಬೆಟ್ಟು ಎಂಬಲ್ಲಿ ನಡೆದಿದೆ.ವರಂಗ ಗ್ರಾಮದ ಮೂಡಬೆಟ್ಟು ನಿವಾಸಿ ಸತೀಶ್ ಪೂಜಾರಿ ಮೃತ ದುರ್ದೈವಿ. ತಂದೆ ಕುಟ್ಟಿ ಪೂಜಾರಿ ಕೊಲೆ ಮಾಡಿದವರು.
ಇವರಿಬ್ಬರು ಪ್ರತಿದಿನ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ರಾತ್ರಿ ವೇಳೆ ಕುಟ್ಟಿ ಪೂಜಾರಿ ಮನೆಯ ಒಳಗೆ ಮಲಗಿದ್ದಾಗ ಸತೀಶ ಪೂಜಾರಿಯು ವಿಪರೀತ ಮದ್ಯಪಾನ ಸೇವಿಸಿ ಬಂದಿದ್ದರು.ತಂದೆ ಮಲಗಿದ್ದ ಕೋಣೆಯ ಬಾಗಿಲಿಗೆ ಕಾಲಿನಿಂದ ಒದ್ದ ಸತೀಶ್ ಪೂಜಾರಿ, ಕುಟ್ಟಿ ಪೂಜಾರಿಯನ್ನು ಮನೆಯ ಹೊರಗೆ ಅಂಗಳಕ್ಕೆ ಎಳೆದು ತಂದಿದ್ದಾರೆ. ಇದರಿಂದ ಕೋಪಗೊಂಡ ಕುಟ್ಟಿ ಪೂಜಾರಿ ಅಡುಗೆ ಕೋಣೆಯಲ್ಲಿದ್ದ ಒಲೆ ಬೆಂಕಿ ಊದುವ ಕಬ್ಬಿಣದ ಕೊಳವೆಯಿಂದ ಸತೀಶ ಪೂಜಾರಿಯ ಕೈಕಾಲುಗಳಿಗೆ ಹಲ್ಲೆ ನಡೆಸಿದರು. ಇದರ ಪರಿಣಾಮ ಸತೀಶ ಪೂಜಾರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.