ಚಿಕ್ಕಮಗಳೂರು; ಆಸ್ಪತ್ರೆಯ ಶವಾಗಾರದಲ್ಲಿ ಅಪ್ಪನ ಮೃತದೇಹ, ಅತ್ತ ಮದುವೆ ಮಂಟಪದಲ್ಲಿ ಮಗಳು ಹೀಗೊಂದು ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಚಿಕ್ಕಮಗಳೂರು ಜಿಲ್ಲೆ ತರೀಕೆರೆ ನಿವಾಸಿ ಚಂದ್ರು (45) ಅವರ ಮಗಳ ಮದುವೆ ಇಂದು ನಿಗದಿಯಾಗಿತ್ತು. ಅದರಂತೆ ನಿನ್ನೆ ಚಂದ್ರು ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಮಗಳು ದೀಕ್ಷಿತಾ ಅವರ ಮದುವೆ ಆಹ್ವಾನ ಪತ್ರಿಕೆ ನೀಡಲು ತೆರಳಿ ವಾಪಾಸ್ ಬರುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆದರೆ ಸಂಬಂಧಿಕರು ಇಂದು ಮದುವೆಯಿದ್ದ ಹಿನ್ನೆಲೆ ಚಂದ್ರು ಅವರ ಮಗಳು ಹಾಗೂ ಪತ್ನಿ ಗೆ ತಿಳಿಸಿದೇ ಮದುವೆ ಮಾಡಿದ್ದಾರೆ.
ಮದುವೆ ಕಾರ್ಯಕ್ಕೆ ಓಡಾಡಿ ಸುಸ್ತಾಗಿ ಚಂದ್ರು ಆಸ್ಪತ್ರೆ ಸೇರಿದ್ದಾರೆ ಎಂದು ಸಂಬಂಧಿಕರು ಹೇಳಿದ್ದರಿಂದ ಅದು ನಿಜ ಎಂದು ಅವರ ಪತ್ನಿ-ಮಗಳು ಭಾವಿಸಿದ್ದರು. ಸಂಬಂಧಿಕರೆಲ್ಲಾ ಸೇರಿ ಆರತಕ್ಷತೆ ಹಾಗೂ ಮದುವೆ ಮುಗಿಸಿದ್ದರು. ಇಂದು ಮದುವೆ ಮುಗಿದ ಬಳಿಕ ಪತ್ನಿಗೆ-ಮಗಳಿಗೆ ಕುಟುಂಬಸ್ಥರು ವಿಷಯ ತಿಳಿಸಿದ್ದಾರೆ.. ವಿಚಾರ ಗೊತ್ತಾಗುತ್ತಿದ್ದಂತೆ ಪತ್ನಿ ಹಾಗೂ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.