ಹೆಬ್ರಿ: ತಾಲ್ಲೂಕಿನ ನಾಡ್ಪಾಲು ಗ್ರಾಮದ ಅಜ್ಜೊಳ್ಳಿ, ಮೇಗದ್ದೆ, ಮುದ್ರಾಡಿಯ ಕಬ್ಬಿನಾಲೆ, ಹೆಬ್ರಿ ಹಾಗೂ ಶಿವಪುರದಲ್ಲಿ ಅಡಿಕೆಗೆ ತಗುಲಿರುವ ಕೊಳೆರೋಗದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮೇ ತಿಂಗಳಿನ ಅಕಾಲಿಕ ಮಳೆಯಿಂದಾಗಿ ಈ ರೀತಿ ಸಮಸ್ಯೆಗಳು ಎದುರಾಗಿವೆ. ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಬಹುತೇಕರಿಗೆ ಕೊಳೆರೋಗ ಕಾಟದಿಂದ ದಿಕ್ಕು ತೋಚದಾಗಿದೆ ಎನ್ನುತ್ತಾರೆ ಕೃಷಿಕರು.
ಕೃಷಿ ಕಾರ್ಮಿಕರ ಕೊರತೆ: ಒಂದೆಡೆ ಕೃಷಿ ಕಾರ್ಮಿಕರ ಕೊರತೆಯಿಂದ ಸರಿಯಾದ ಸಮಯದಲ್ಲಿ ಅಡಿಕೆಗೆ ಔಷಧ ಸಿಂಪಡಿಸಲು ಆಗುತ್ತಿಲ್ಲ. ಕೃಷಿ ನಿರ್ವಹಣೆಗೆ ಬಳಸುವ ಗೊಬ್ಬರ, ಔಷಧಗಳ ಬೆಲೆಯೂ ಹೆಚ್ಚಾಗಿದ್ದು, ಅದರೊಂದಿಗೆ ಪ್ರಕೃತಿ ವಿಕೋಪಗಳು ಕೃಷಿಕರಿಗೆ ಸವಾಲಾಗಿವೆ. ಅಕಾಲಿಕ ಮಳೆಯನ್ನು ಗಮನಿಸಿ ನಾಡ್ಪಾಲಿನ ಬಹುತೇಕ ರೈತರು ನಾಲ್ಕು ಬಾರಿ ಔಷಧವನ್ನು ಸಿಂಪಡಿಸಿದ್ದರು. ಆದರೆ ಕೊಳೆರೋಗ ನಿಯಂತ್ರಣ ಸಾಧ್ಯವಾಗಿಲ್ಲ.
ಉದುರಿದ ಅಡಿಕೆಯನ್ನು ಯಾರೂ ತೋಟದಲ್ಲೇ ಬಿಡುವುದಿಲ್ಲ. ಬಿದ್ದ ಅಡಿಕೆಯನ್ನು ತೋಟದಲ್ಲಿ ಕೊಳೆಯಲು ಬಿಟ್ಟರೆ ಮತ್ತೆ ಕೊಳೆರೋಗ ಹೆಚ್ಚಾಗುತ್ತದೆ. ಆದರೆ, ಬಿದ್ದ ಅಡಿಕೆ ಆರಿಸಿದರೆ, ಪರಿಶೀಲನೆಗೆ ಬಂದವರಿಗೆ ವಿಷಯ ಮನವರಿಕೆ ಕಷ್ಟವಾಗುತ್ತದೆ ಅಂತಾ ರೈತರು ಹೇಳಿದ್ದಾರೆ.