ಬೆಳ್ತಂಗಡಿ : ಖ್ಯಾತ ಚಲನಚಿತ್ರ ನಟಿ ಲೀಲಾವತಿ(85) ಅವರು ವಯೋ ಸಹಜ ಕಾಯಿಲೆಯಿಂದ ನ. 8 ರಂದು ಸಂಜೆ ನಿಧನರಾಗಿದ್ದು. ಇವರು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸರಿಸುಮಾರು 600 ಕ್ಕೂ ಹೆಚ್ಚು ಚಲನಚಿತ್ರದಲ್ಲಿ ನಟಿಸಿದ ನಟಿ ಲೀಲಾವತಿ ಕುಟುಂಬ ಇಂದಿಗೂ ಬೆಳ್ತಂಗಡಿ ತಾಲೂಕಿನಲ್ಲಿ ಇದೆ ಎನ್ನುವ ವಿಚಾರವನ್ನು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ತಂಡ ಮಾಹಿತಿ ಕಲೆ ಹಾಕಿ ಅವರ ಮನೆಗಳಿಗೆ ಭೇಟಿ ನೀಡಿ ಪ್ರತ್ಯಕ್ಷ ವರದಿ ಮಾಡಿದೆ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮುರ ಎಂಬಲ್ಲಿ ಕ್ರಿಶ್ಚಿಯನ್ ಸಮುದಾಯದಲ್ಲಿ ಹುಟ್ಟಿದ ಇಬ್ಬರು ಮಕ್ಕಳಾದ ಅಂಜಲೀನಾ ಸಿಕ್ವೇರಾ ಮತ್ತು ನಟಿಯಾಗಿದ್ದ ಲೀನಾ ಸಿಕ್ವೇರಾ ಯಾನೆ ಲೀಲಾವತಿ ಆಗಿದ್ದರು. ಬೆಂಗಳೂರಿಗೆ ಹೋಗಿ ಚಲನಚಿತ್ರಕ್ಕೆ ಸೇರಿದ ಬಳಿಕ ಲೀನಾ ಸಿಕ್ವೇರಾ ಇರುವುದನ್ನು ಲೀಲಾವತಿಯಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಚಲನಚಿತ್ರದಲ್ಲಿ ಹೆಸರು ಮಾಡಿ ನಾವೂರು ಗ್ರಾಮಕ್ಕೆ ಹೆಸರು ತಂದಿದ್ದಾರೆ ನಮಗೆ ಸಂತೋಷವಾಗುತ್ತದೆ ಎಂದು ಕುಟುಂಬದವರು ಮಹಾಎಕ್ಸ್ ಪ್ರೆಸ್ ಗೆ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಲೀನಾ ಸಿಕ್ವೇರಾ ಯಾನೆ ಲಿಲ್ಲಿ ಯಾನೆ ಎಲ್ಲೂ ಎಂಬ ಮೂರು ಹೆಸರಿನಿಂದ ಕರೆಯುತ್ತಿದ್ದರು ನಂತರ ಬೆಂಗಳೂರಿಗೆ ಹೋದ ಬಳಿಕ ಲೀಲಾವತಿಯಾಗಿ ಬದಲಾಗಿದ್ದು ಮಾತ್ರ ರೋಚಕವಾಗಿದೆ. ಈ ಬಗ್ಗೆ ಕುಟುಂಬವನ್ನು ಹಾಗೂ ಬಾಲ್ಯ ಸ್ನೇಹಿತರನ್ನು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ತಂಡ ಕಳೆದ ಎರಡು ವಾರಗಳಿಂದ ಬೇರೆ ಬೇರೆ ಕಡೆ ವಾಸವಾಗಿರುವ ಲೀಲಾವತಿ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಮನೆಗೆ ಭೇಟಿ ನೀಡಿ ಅವರ ಬಾಲ್ಯದ ಮಾಹಿತಿಗಳನ್ನು ಕಲೆ ಹಾಕಿದೆ.
ಲೀಲಾವತಿಯ ಸಂಬಂಧಿಕರ ವಿವರ:ನಾವೂರಿನಲ್ಲಿರುವ ಫ್ರಾನ್ಸಿಸ್ ಲೋಬೋ, ಸರ್ಪಿನಾ ಡಿಸಿಲ್ವಾ , ಕರ್ಮಿನ್ ಡಿಸಿಲ್ವಾ, ಕುತ್ರೊಟ್ಟು ರೋಮನ್ ಪಿಂಟೋ , ವೇಣೂರಿನಲ್ಲಿರುವ ಲೀಲಾವತಿ ತಂದೆಯ ಸಣ್ಣ ದಿಯೋಗ್ ಅವರ ಮಗಳು ಲೂಸಿ ಸಿಕ್ವೇರಾ ಹಾಗೂ ಲೂಸಿ ಅವರ ಮಗ ಅಲೆಕ್ಸ್ ಡಿಸೋಜಾ ಇವರೆಲ್ಲ ಲೀಲಾವತಿ ಯಾನೆ ಲೀನಾ ಸಿಕ್ವೇರಾ ಅವರಿಗೆ ಹತ್ತಿರದ ಸಂಬಂಧಿಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಅದಲ್ಲದೆ ಇನ್ನೂ ಹಲವು ಮಂದಿ ಸಂಬಂಧಿಕರು ವಿವಿಧ ಕಡೆ ವಾಸವಾಗಿದ್ದಾರೆ ಎನ್ನುವ ಸ್ಪೋಟಕ ಮಾಹಿತಿ ನೀಡಿದ್ದಾರೆ ಸಂಬಂಧಿಗಳು.
ಸಂಬಂಧಿ ಹಾಗೂ ಬಾಲ್ಯ ಸ್ನೇಹಿತೆ ಕರ್ಮಿನ್ ಡಿಸಿಲ್ವಾ ಮಾಹಿತಿ:ಲೀಲಾವತಿ ಯಾನೆ ಲೀನಾ ಸಿಕ್ವೇರಾ ಮತ್ತು ಸಹೋದರಿ ಅಂಜಲೀನಾ ಸಿಕ್ವೇರಾ ಅವರು ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿದ್ದು ಅವರು ಮೊದಲು ಬೆಳ್ತಂಗಡಿ ಚರ್ಚ್ ಗೆ ಹೋಗುತ್ತಿದ್ದರು. ಬಳಿಕ ಇಂದಬೆಟ್ಟಿನಲ್ಲಿ ಆರಂಭವಾದ ಸಂತ ಪ್ರಾನ್ಸಿಸ್ ಕ್ಸೇವಿಯರ್ ದೇವಾಲಯಕ್ಕೆ ಹೋಗಲು ಆರಂಭಿಸಿದ್ದರು. ನಾನು ಕೂಡ ಚರ್ಚ್ ಗೆ ಹೋಗುತ್ತಿದ್ದೆ. ಲೀಲಾವತಿ ಅವರಿಗೆ ನಾಟಕದಲ್ಲಿ ಆಸಕ್ತಿ ಇತ್ತು. ಅವರನ್ನು ನಮ್ಮ ಮುರದ ದಿ.ಇಸುಬು ಬ್ಯಾರಿ ಅವರು ಸೈಕಲಿನಲ್ಲಿ ಬೆಳ್ತಂಗಡಿಗೆ ಬಿಟ್ಟು ಬಂದಿದ್ದರು. ಬಳಿಕ ಚಲನಚಿತ್ರಕ್ಕೆ ಹೋಗಿ ಕರ್ನಾಟಕಕ್ಕೆ ಹೆಸರು ತಂದಿದ್ದಾರೆ. ಲೀನಾ ಸಿಕ್ವೇರಾ ಅಗಿದ್ದ ಅವರು ಲೀಲಾವತಿ ಮಾಡಿಕೊಂಡಿದ್ದಾರೆ. ಅವರ ಅಕ್ಕ ಅಂಜಲೀನಾ ಸಿಕ್ವೇರಾ ಅವರು ಟೀಚರ್ ಅಗಿದ್ದರು ಅವರು ಕೆಲ ವರ್ಷದ ಹಿಂದೆ ತೀರಿ ಹೋಗಿದ್ದಾರೆ. ನಾನು ಲೀಲಾವತಿ ಅವರೊಂದಿಗೆ ಮುರದಲ್ಲಿ ಇದ್ದ ಶಾಲೆಗೆ ಒಂದನೇ ಮತ್ತು ಎರಡನೇ ತರಗತಿಗೆ ಒಟ್ಟಿಗೆ ಹೋಗಿದ್ದೇವೆ. ಬಳಿಕ ನಾನು ಶಾಲೆಗೆ ಹೋಗಿಲ್ಲ ಅವರು ನಾಲ್ಕನೇ ತರಗತಿಯವರೆಗೆ ಹೋಗಿದ್ದಾರೆ.ನನಗೆ ಬಾಲ್ಯದ ಎಲ್ಲಾ ಮಾಹಿತಿಗಳನ್ನು ನೆನಪಿಲ್ಲ. ಅವರ ಹತ್ತಿರದ ಸಂಬಂಧಿ ಲೂಸಿ ಸಿಕ್ವೇರಾ ವೇಣೂರಿನಲ್ಲಿದ್ದಾರೆ ಎಂದು ಕುಟುಂಬದ ಹಿರಿಯ ಅಜ್ಜಿ ಕರ್ಮಿನ್ ಡಿಸಿಲ್ವಾ(70) ಮಹಾಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.
ಲೀಲಾವತಿ ಅವರೊಂದಿಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಬಾಲ್ಯ ಸ್ನೇಹಿತ ಅಣ್ಣಿ ಮೂಲ್ಯ :ನಾನು ಲೀಲಾವತಿಯವರನ್ನು ದನ ಮೇಯಿಸುತ್ತಿರುವಾಗ ಚೆನ್ನಾಗಿ ನೋಡುತ್ತಿದ್ದೆ. ಅವರನ್ನು ಎಲ್ಲು ಅಂತ ಆ ಸಮಯದಲ್ಲಿ ಕರೆಯುತ್ತಿದ್ದರು.ಅವರು ರಸ್ತೆಯ ಎಡ ಮತ್ತು ಬಲಭಾಗದಲ್ಲಿ ಎರಡು ಮುಲಿ ಹುಲ್ಲಿನ ಮನೆಯಲ್ಲಿ ಅಕ್ಕ-ತಂಗಿ ವಾಸವಾಗಿದ್ದರು. ನಾನು ದನ ಮೇಯಿಸುವುದು ನೋಡಿ ನನಗೆ ಶಾಲೆಗೆ ಹೋಗಲು ಹೇಳುತ್ತಿದ್ದರು. ಅದನ್ನು ನಾನು ನನ್ನ ತಂದೆಗೆ ಬಾಯಿಯಮ್ಮ ಶಾಲೆಗೆ ಹೋಗಲು ಹೇಳಿದ್ದಾರೆ ಎಂದಿದ್ದೆ. ಆದ್ರೆ ನಮಗೆ ಆ ಸಮಯದಲ್ಲಿ ಶಾಲೆಗೆ ಹೋಗಲು ಸಾಧ್ಯ ಆಗಿಲ್ಲ. ಅವರನ್ನು ಪಕ್ಕದವರಾದ ಇಸುಬು ಅವರು ಲೀಲಾವತಿಗೆ 16,17 ವಯಸ್ಸಿನಲ್ಲಿರುವಾಗ ಸೈಕಲಿನಲ್ಲಿ ನಾವೂರದಿಂದ ಬೆಳ್ತಂಗಡಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದರು. ಆ ಬಳಿಕ ಅವರು ನಾಟಕದಲ್ಲಿ ಅಭಿನಯಿಸುತ್ತಿದ್ದ ಮಂಗಳೂರಿನಲ್ಲಿದ್ದರು. ಅಲ್ಲಿಂದ ಬಳಿಕ ಬೆಂಗಳೂರಿಗೆ ಹೋಗಿ ಸಿನಿಮಾಗಳಲ್ಲಿ ಅಭಿನಯಿಸಲು ಆರಂಭಿಸಿದರು. ನಾನು ರಾಜ್ ಕುಮಾರ್ ಜೊತೆ ನಟಿಸಿರುವ ಹಲವು ಚಲನಚಿತ್ರ ನೋಡಿದ್ದೇನೆ ಎಂದು ಬಾಲ್ಯದ ಸ್ನೇಹಿತ ನಾವೂರು ತಿಮರಡ್ಡ ನಿವಾಸಿ ಅಣ್ಣು ಮೂಲ್ಯ(76) ಹಳೆಯ ನೆನನಪುಗಳನ್ನು ಮೆಲುಕು ಹಾಕಿದ್ದಾರೆ.
ನನ್ನ ತಂದೆ ಲೀಲಾವತಿ ಅವರನ್ನು ಸೈಕಲ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು: ಸ್ಥಳೀಯರು ನೀಡದ ಮಾಹಿತಿ ಮೇರಗೆ ನಾವೂರು ಮಸೀದಿ ಹಿಂಭಾಗದಲ್ಲಿರುವ ಮೊಹಮ್ಮದ್ ಯಾನೆ ಮೋನು ಅವರ ಮನೆಗೆ ಹೋಗಿ ಲೀಲಾವತಿ ಅವರ ಬಾಲ್ಯದ ಮಾಹಿತಿ ಕೇಳಿದಾಗ ನನ್ನ ತಂದೆಯವರಾದ ಇಸುಬು(75) ಅವರು ತೀರಿಹೋಗಿ 18 ವರ್ಷವಾಗಿದೆ. ಅವರು ಮನೆಯಲ್ಲಿ ಕೆಲವು ವಿಚಾರಗಳನ್ನು ಹೇಳಿದ ಮಾಹಿತಿ ಪ್ರಕಾರ ಆಗಿನ ಕಾಲದಲ್ಲಿ ಎತ್ತಿನ ಗಾಡಿ ಮತ್ತು ಸೈಕಲ್ ಮಾತ್ರ ಇತ್ತು. ಲೀಲಾವತಿ ಮತ್ತು ಅವರ ಸಹೋದರಿಯನ್ನು ಸೈಕಲಿನಲ್ಲಿ ಕರೆದುಕೊಂಡು ನಾವೂರದಿಂದ ಬೆಳ್ತಂಗಡಿಗೆ ನನ್ನ ತಂದೆಯವರು ಬಿಟ್ಟು ಬಂದಿರುವ ಬಗ್ಗೆ ಹೇಳಿದ್ದರು.ಬಳಿಕ ಮಂಗಳೂರಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗಿ ಚಲನಚಿತ್ರದಲ್ಲಿ ನಟಿಸಿ ಸಾಧನೆ ಮಾಡಿದ್ದಾರೆ ಎಂದು ಇಸುಬು ಅವರ ಮಗ ಮೊಹಮ್ಮದ್ ಯಾನೆ ಮೋನು(66) ಮಾಹಿತಿ ನೀಡಿದ್ದಾರೆ.
ಸಂಬಂಧಿ ಸರ್ಪಿನ್ ಡಿಸಿಲ್ವಾ ಮಾಹಿತಿ: ನನಗೆ ತಂದೆ ತಾಯಿ ಲೀಲಾವತಿ ಬಗ್ಗೆ ಹೇಳಿ ಗೊತ್ತು ಅವರು ಕ್ರಿಶ್ಚಿಯನ್ ಸಮುದಾಯದವರು ಈಗ ಹೆಸರು ಬೇರೆ ಮಾಡಿದ್ದಾರೆ. ಕಳೆದ ಸುಮಾರು 25 ವರ್ಷದ ಹಿಂದೆ ಇಲ್ಲಿ ಹಿಂದೆ ಇದ್ದ ಮುರಕ್ಕೆ ಲೀಲಾವತಿ ಮಗ ವಿನೋದ್ ರಾಜ್ ಹಾಗೂ ಅವರ ಸಾಕು ನಾಯಿ ಜೊತೆ ಬಂದಿದ್ದರು. ಅವರು ಇಲ್ಲಿ ಇದ್ದ ಲೂಸಿ ಸಿಕ್ವೇರಾ ಬಗ್ಗೆ ಮಾಹಿತಿ ನನ್ನಲ್ಲಿ ಕೇಳಿದರು . ಅವಾಗ ಅವರು ವೇಣೂರು ಕಡೆ ಇದ್ದಾರೆ ಎಂದು ಹೇಳಿದೆ. ಅವರು ಹೋಗುವಾಗ ಲೀಲಾವತಿ ನಾನು ಎಂದು ಹೇಳಿ ಹೋದರು ಬಳಿಕ ಮನೆಯಲ್ಲಿ ಹೇಳಿದಾಗ ಅವರು ಯಾರು ಅಂತ ಅಮೇಲೆ ಗೊತ್ತಾಗಿದ್ದು. ಅವರು ನಮ್ಮ ಸಮುದಾಯದಲ್ಲಿ ಹುಟ್ಟಿ ಚಲನಚಿತ್ರದಲ್ಲಿ ಹೆಸರು ಮಾಡಿದ್ದು ತುಂಬ ಖುಷಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಲೀಲಾವತಿ ಸಹೋದರಿ ಲೂಸಿ ಸಿಕ್ವೇರಾ ಹೇಳಿದ್ದೇನು?:ನಾವೂರು ಕುಟುಂಬದವರು ನೀಡಿದ ಮಾಹಿತಿ ಮೇರೆಗೆ ಮುರದ ಮನೆಯಲ್ಲಿ ಲೀಲಾವತಿ ಜೊತೆಯಲ್ಲಿ ವಾಸವಾಗಿದ್ದ ಈಗ ಪ್ರಸ್ತುತ ವಾಸವಾಗಿರುವ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಕರ್ಬಜೆಯಲ್ಲಿರುವ ಲೀಲಾವತಿಯವರ ತಂದೆಯ ಅಣ್ಣ ದಿಯೋಗ್ ಸಿಕ್ವೇರಾ ಮತ್ತು ಮಗ್ಡೇಲಿನಾ ದಂಪತಿ ಮಗಳಾದ ಲೂಸಿ ಸಿಕ್ವೇರಾ(93) ಅವರನ್ನು ಭೇಟಿಯಾಗಲು ಬೆಳ್ತಂಗಡಿಯಿಂದ 21 ಕಿ.ಮೀ ದೂರಕ್ಕೆ ಹೋಗಿ ಅವರ ಮನೆಗೆ ಹೋದಾಗ ಅವರು ವಯೋ ಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದು ಗೊತ್ತಾಗಿದೆ. ಅವರಲ್ಲಿ ಲೀನಾ ಸಿಕ್ವೇರಾ ಯಾನೆ ಲೀಲಾವತಿ ಬಗ್ಗೆ ಕೇಳಿದಾಗ ನನಗೆ ಸರಿಯಾದ ಮಾಹಿತಿ ಗೊತ್ತಾಗುತ್ತಿಲ್ಲ. ದೊಡ್ಡ ಮಗ ಅಲೆಕ್ಸ್ ಹೇಳಿ ವಿಚಾರ ಗೊತ್ತಿದೆ.ಟಿವಿಯಲ್ಲಿ ನೋಡಿದ್ದೇನೆ. ಆದ್ರೆ ಮುರದಲ್ಲಿ ಮನೆಯಲ್ಲಿ ನಾನು ಇದ್ದೆ. ನನಗೆ ಸಣ್ಣ ವಯಸ್ಸಿನಲ್ಲಿ ಮದುವೆ ಮಾಡಿಕೊಟ್ಟಿದ್ದಾರೆ. ನನಗೆ 8 ಜನ ಮಕ್ಕಳಿದ್ದಾರೆ.ನಟಿ ಲೀಲಾವತಿ ನನಗೆ ಸಂಬಂಧ ಇದೆಯಾ.? ಸಂಬಂಧ ಇಲ್ಲವಾ.? ಎಂದು ಹೇಳಲು ಈಗ ಸಾಧ್ಯ ಅಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸಂಬಂಧಿ ಅಲೆಕ್ಸ್ ಡಿಸೋಜಾ ಮಾಹಿತಿ:ಲೂಸಿ ಸಿಕ್ವೇರಾ ಅವರ ದೊಡ್ಡ ಮಗ ಅಲೆಕ್ಸ್ ಡಿಸೋಜಾ ಅವರನ್ನು ಭೇಟಿಯಾಗಿ ಲೀನಾ ಸಿಕ್ವೇರಾ ಯಾನೆ ಲೀಲಾವತಿ ಬಗ್ಗೆ ಮಾಹಿತಿ ಕೇಳಿದಾಗ ಸಂಬಂಧದ ಬಗ್ಗೆ ಗೊತ್ತಿಲ್ಲ . ತನ್ನ 20 ನೇ ವಯಸ್ಸಿನಲ್ಲಿ ಒಮ್ಮೆ ಲೀಲಾವತಿಯನ್ನು ನಾರಾವಿಯಲ್ಲಿ ನಾಟಕ ಪ್ರದರ್ಶನ ಇದ್ದಾಗ ನಾಟಕದಲ್ಲಿ ನಟಿಸುವಾಗ ನೋಡಿದ್ದೇನೆ. ನಮ್ಮ ಧರ್ಮದಲ್ಲಿ ಹುಟ್ಟಿದ್ದಾರೆ ಎಂಬುವುದು ಗೊತ್ತಿದೆ. ಅವರ ಬೇರೆಯಾಗಿದ್ದಾರೆ. ನಾವು ಈ ಕಡೆ ಬಂದಿದ್ದೇವೆ. ನಮಗೆ ಸಂಬಂಧ ಇರುವ ಬಗ್ಗೆ ಮಾಹಿತಿ ಏನೂ ತಿಳಿದಿಲ್ಲ. ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಟಿವಿಯಲ್ಲಿ ನೋಡಿ ಗೊತ್ತಿದೆ. ರಕ್ತ ಸಂಬಂಧಿಕರೆಂದು ಇನ್ನೂ ನಾವು ಬೆಂಗಳೂರಿಗೆ ಹೋಗಿ ನೋಡಲು ಸಾಧ್ಯವಿಲ್ಲ. ನಮಗೆ ಕೆಲಸ ಜಾಸ್ತಿ ಇದೆ. ನಾವು ಅವರನ್ನು ಏನಿದ್ದರೂ ಇನ್ನೂ ಕೂಡ ಟಿವಿಯಲ್ಲಿ ನೋಡಬೇಕು ಅಷ್ಟೇ ಎಂದು ಮಾಹಿತಿ ನೀಡಿದ್ದಾರೆ.
ಕೆಲವೊಂದು ಮಾಹಿತಿ ನಿಗೂಢವಾಗಿಟ್ಟ ನಟಿ:ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮುರ ನಿವಾಸಿಯಾಗಿದ್ದ ಖ್ಯಾತ ಚಲನಚಿತ್ರ ನಟಿ ಲೀಲಾವತಿ ಅವರು ತನ್ನ ಧರ್ಮದ ಬಗ್ಗೆ ಇರಬಹುದು , ಮದುವೆಯಾದ ಬಗ್ಗೆ ಮಾಹಿತಿ ಇಂದಿನವರೆಗೂ ಯಾರಲ್ಲಿಯೂ ಹಂಚಿಕೊಳ್ಳದೆ ಮುಚ್ಚಿಟ್ಟಿದ್ದಾರೆ. ಆದ್ರೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಾನು ಬೆಳ್ತಂಗಡಿಯವಳು ಎಂದು ಮಾತ್ರ ಹೇಳಿದ್ದರು. ಇದೀಗ ಲೀಲಾವತಿ ಸಾವಿನ ಬಳಿಕ ತನ್ನ ಬಾಲ್ಯದ ಎಲ್ಲಾ ಸತ್ಯ ವಿಚಾರಗಳು ಒಂದೊಂದಾಗಿ ಹೊರಬಿದ್ದಿದೆ. ಆದ್ರೆ ಬಾಲ್ಯದ ಮಾಹಿತಿಗಳನ್ನು ನಿಗೂಢವಾಗಿಟ್ಟು ಮಾತ್ರ ಅಚ್ಚರಿಗೆ ಕಾರಣವಾಗುತ್ತಿದೆ. ಏನೇ ಆದ್ರೂ ಲೀಲಾವತಿಯವರು ಹಳ್ಳಿಯಿಂದ ಹೋಗಿ ಬಹುದೊಡ್ಡ ಸಾಧನೆ ಮಾಡಿರುವುದು ಮಾತ್ರ ಮೆಚ್ಚಲೇಬೇಕಾಗಿದೆ.