ಶ್ರೀನಗರ: ತಾವು ಪ್ರಧಾನಿಯಾದ 28 ವರ್ಷಗಳ ನಂತರ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಇಂದು ಕಾಶ್ಮೀರಕ್ಕೆ ಭೇಟಿ ನೀಡಿ ದೇಶದ ಕೊನೆಯ ಭಾಗದಲ್ಲಿರುವ ಉರಿ ಜಲವಿದ್ಯುತ್ ಘಟಕವನ್ನು ಖುದ್ದು ವೀಕ್ಷಿಸಿದರು.
ನಿನ್ನೆ ಶ್ರೀನಗರಕ್ಕೆ ತೆರಳಿದ್ದ ದೇವೇಗೌಡರು, ಇಂದು ಬೆಳಗ್ಗೆ ಶ್ರೀನಗರದಿಂದ ಬಾರಾಮುಲ್ಲಾಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿದರು. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಈ ಶ್ರೀನಗರ-ಬಾರಾಮುಲ್ಲಾ ರೈಲ್ವೇ ಮಾರ್ಗಕ್ಕೆ ಮಂಜೂರಾತಿ ದೊರೆತಿತ್ತು.
ಬಳಿಕ ಉರಿ ರಾಷ್ಟ್ರೀಯ ಜಲವಿದ್ಯುತ್ ಉತ್ಪಾದನಾ ಘಟಕಕ್ಕೆ ಹೆಚ್.ಡಿ. ದೇವೇಗೌಡ ಭೇಟಿ ಕೊಟ್ಟು ಘಟಕದ ಉದ್ಘಾಟನಾ ಫಲಕದ ಮುಂದೆ ನಿಂತು ಬಹಳ ಸಂತೋಷದಿಂದ ಫೋಟೋ ತೆಗೆಸಿಕೊಂಡರು.
480 ಮೆಗಾ ವ್ಯಾಟ್ ಸಾಮರ್ಥ್ಯದ ಈ ವಿದ್ಯುತ್ ಘಟಕವೂ ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಉದ್ಘಾಟನೆ ಆಗಿತ್ತು. ಈ ವಿದ್ಯುತ್ ಉತ್ಪಾದನಾ ಘಟಕವೂ ಉರಿಯ ಝಿಲಂ ನದಿ ದಂಡೆಯಲ್ಲಿ ಭಾರತ – ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಗೆ ಅತಿ ಸಮೀಪದಲ್ಲಿದೆ.
ನಾಳೆ ಮಾಜಿ ಪ್ರಧಾನಿ ದೇವೇಗೌಡ ಶ್ರೀನಗರದ ದಾಲ್ ಸರೋವರ ಹಾಗೂ ಶ್ರೀ ಶಂಕರಾಚಾರ್ಯ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿದ 28 ವರ್ಷಗಳ ಬಳಿಕ ಮೊದಲ ಬಾರಿಗೆ ಇಂದು ಹೆಚ್.ಡಿ. ದೇವೇಗೌಡ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.