ಚಿಕ್ಕಮಗಳೂರು : ರಸ್ತೆ ಬದಿ ಎರಡು ಬೃಹತ್ ಆನೆ ದಂತಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನ ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮಾಲು ಸಮೇತ ಬಂಧಿಸಿದ್ದಾರೆ.
ಬಂಧಿತರನ್ನ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಮೂಲದ ಶಿವಕುಮಾರ್, ಸುಂದ್ರೇಶ್, ಮಹಾಂತೇಶ್, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮೂಲದ ನೂರ್ ಅಹಮದ್, ಚಿತ್ರದುರ್ಗ ತಾಲೂಕಿನ ಅಂಜಿನಪ್ಪ ಎಂದು ಗುರುತಿಸಲಾಗಿದೆ.
ಆರು ತಿಂಗಳಿಂದ ಆನೆ ದಂತ ಬಂಧಿತರಲ್ಲಿ ಇತ್ತು. ಮಂಗಳವಾರ ಮಾರಾಟ ಮಾಡಲು ಯತ್ನಿಸುತ್ತಿದ್ದೇವು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಸಂಚಾರಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ತರೀಕೆರೆ ತಾಲೂಕು ಮೂಲದ ಶಿವಕುಮಾರ್ ಹಾಗೂ ಸುಂದ್ರೇಶ್ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಕ್ಕಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮೀಸಲು ಹಾಗೂ ದಟ್ಟಾರಣ್ಯ. ಅನುಮತಿ ಇಲ್ಲದೆ ಯಾರು ಒಳಗೆ ಹೋಗುವಂತಿಲ್ಲ. ಆದರೂ ಕಾಫಿ ಎಸ್ಟೇಟ್ನಲ್ಲಿ ಕೆಲಸಗಾರರಾಗಿದ್ದ ಶಿವಕುಮಾರ್ ಹಾಗೂ ಸುಂದ್ರೇಶ್ ಮೀಸಲು ಅರಣ್ಯದ ಹಳ್ಳದಲ್ಲಿ ಅಕ್ರಮವಾಗಿ ಮೀನು ಹಿಡಿಯಲು ಹೋಗುತ್ತಿದ್ದರು. ಈ ವೇಳೆ, ಕಾಡಿನಲ್ಲಿ ಆನೆ ಸಾವನ್ನಪ್ಪಿದ್ದು ಕಂಡು ಅದರ ಎರಡು ಬೃಹತ್ ದಂತಗಳನ್ನ ತೆಗೆದು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ಆರು ತಿಂಗಳಿಂದ ಇವರ ಬಳಿಯೇ ಇತ್ತು. ಅದನ್ನು ಮಾರಾಟ ಮಾಡಲು ಗೊತ್ತಾಗದೆ ಮಧ್ಯವರ್ತಿಗಳಿಂದ ತಾಲೂಕಿನ ಅಲ್ಲಂಪುರ ಪೆಟ್ರೋಲ್ ಬಂಕ್ ಮುಂಭಾಗದ ರಸ್ತೆಯಲ್ಲಿ ಮಂಗಳವಾರ ನಿಂತು ಮಾರಾಟ ಮಾಡಲು ಮುಂದಾಗ ಮೂವರು ಮಧ್ಯವರ್ತಿಗಳು ಹಾಗೂ ಆನೆ ದಂತ ಇಬ್ಬರು ಸೇರಿ ಐವರನ್ನ ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ ಎರಡು ಆನೆ ದಂತ ಹಾಗೂ ಮಾರುತಿ ಓಮಿನಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಚರಣೆಗೆ ಮಡಿಕೇರಿ ಅರಣ್ಯ ಘಟಕದ ಎಸ್ಪಿ ಚಂದ್ರಕಾಂತ್ ಮಾರ್ಗದರ್ಶನಲ್ಲಿ ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್ ಇನ್ಸ್ಪೆಕ್ಟರ್ ಶರತ್, ಸಿಬ್ಬಂದಿ ಹೆಚ್.ದೇವರಾಜ್, ಡಿ.ಎಚ್.ದಿನೇಶ್, ಎಸ್.ಕೆ.ದಿವಾಕರ್, ಕೆ.ಎಸ್.ದಿಲೀಪ್, ಹಾಲೇಶ್, ಹೇಮಾವತಿ, ತಿಮ್ಮಶೆಟ್ಟಿಯವರು ಪಾಲ್ಗೊಂಡಿದ್ದರು.