ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಾರ್ಯ ಕಲ್ಕಾಜೆ ಪರಿಸರ ಹಾಗೂ ಕನ್ಯಾಡಿ ಸಮೀಪ ಕಾಡಾನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಕಳೆದ ಎರಡು ದಿನಗಳಿಂದ ಒಂಟಿ ಸಲಗವೊಂದು ಕೃಷಿ ಭೂಮಿಗೆ ನುಗ್ಗಿ ತೆಂಗು, ಬಾಳೆ ಗಿಡಗಳನ್ನು ನಾಶ ಮಾಡಿದೆ.
ಮಾ. 4ರಂದು ಧರ್ಮಸ್ಥಳದ ಪಾಂಗಳ, ಎರ್ಮಾಳ ಮತ್ತು ಅಂಬ್ಯದಲ್ಲಿ ಕಾಣಿಸಿಕೊಂಡಿದ್ದ ಆನೆ ಪಟಾಕಿ ಸಿಡಿಸಿದ ಶಬ್ದಕ್ಕೆ ಭಯಗೊಂಡು ಇತ್ತ ದಾಳಿಯಿಟ್ಟಿದೆ.
ಮಾ. 5ರಂದು ಬೆಳಗ್ಗೆ ನರೇಶ್ ಹಾಗೂ ಹರೀಶ್ ಗೌಡ ಅವರ ತೋಟದಲ್ಲಿ ಒಂಟಿ ಸಲಗ ಬಾಳೆ ಗಿಡಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಹೋಗಿದೆ. ತಡರಾತ್ರಿ 2 ಗಂಟೆ ವೇಳೆ ನಾಯಿಗಳು ಬೊಗಳಿದಾಗ ಆನೆ ಬಂದಿರುವ ವಿಚಾರ ಗೊತ್ತಾಗಿದೆ. ಮನೆಯವರು ಊರಿನವರೆಗೆ ಜಾಗರೂಕತರಾಗಿರುವಂತೆ ಫೋನ್ ಕರೆ ಮೂಲಕ ಮತ್ತು ಸಂದೇಶದ ಮೂಲಕ ತಿಳಿಸಿದ್ದಾರೆ.
ಮಾ. 6ರಂದು ಮುಂಜಾನೆ 4ರ ಸುಮಾರಿಗೆ ಕನ್ಯಾಡಿಯಿಂದ ನೀರ ಚಿಲುಮೆ ಪ್ರದೇಶದಲ್ಲಿ ಕಾಣಿಸಿ ಕೊಂಡ ಸಲಗ ಚಂದ್ರಕಾಂತ್ ಅವರ ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ನಾಶ ಮಾಡಿವೆ.