ಉಪ್ಪಿನಂಗಡಿ: ಕಳ್ಳತನಕ್ಕೆ ಬಂದ ಏಟು ಮಾಡಿಕೊಂಡು, ಊರೆಲ್ಲಾ ರಕ್ತ ಸುರಿಸಿಕೊಂಡು ಓಡಾಡಿ ಪೊಲೀಸರಿಗೆ ತನ್ನ ಸುಳಿವುವನ್ನು ಕಳ್ಳನೊಬ್ಬ ತಾನೇ ಕೊಟ್ಟು ಸಿಕ್ಕಿ ಹಾಕಿಕೊಂಡ ಘಟನೆ ಬೆಳ್ತಂಗಡಿಯ ಕರಾಯದಲ್ಲಿ ನಡೆದಿದೆ.
ಇಲ್ಲಿನ ಗ್ರಾ.ಪಂ. ಕಚೇರಿ ಪಕ್ಕದಲ್ಲಿರುವ ಮೂರ್ತೆದಾರರ ಬ್ಯಾಂಕ್ ಗೆ ನುಗ್ಗಲು ಯತ್ನಿಸಿದ ಕಳ್ಳನೊಬ್ಬ ಮುಂಭಾಗದ ಬಾಗಿಲು ಒಡೆಯಲು ಮಂದಾಗಿದ್ದಾನೆ. ಅದು ವಿಫಲವಾದಾಗ ಸನಿಹದಲ್ಲೆ ನಿಲ್ಲಿಸಿ ಹೋದ ಪಿಕಪ್ ವಾಹನದಲ್ಲಿರುವ ರಾಡ್ ಅನ್ನು ಬಳಸಲು ಯತ್ನಿಸಿದ್ದಾನೆ. ಪಿಕಪ್ ಬಾಗಿಲು ತೆಗೆಯಲು ಅಸಾಧ್ಯವಾದಾಗ ಮುಂಭಾಗದ ಗಾಜು ಒಡೆದು ರಾಡು ತೆಗೆದು ಬ್ಯಾಂಕ್ನ ಬಾಗಿಲು ಒಡೆಯುವುದನ್ನು ಬಿಟ್ಟು ಪಕ್ಕದ ಹೊಟೇಲ್ಗೆ ನುಗ್ಗಿದ್ದಾನೆ. ಅಲ್ಲಿ ಐದು ಸಾವಿರ ರೂ.ಗೂ ಹೆಚ್ಚು ಹಣ ದೋಚಿದ್ದಾನೆ.
ಅನಂತರ ಆ ಕಳ್ಳ ಪಕ್ಕದ ಕ್ಲಿನಿಕ್ನ ಹಿಂಭಾಗದ ಕಿಟಕಿಯ ರಾಡ್ ಮುರಿದು ಒಳನುಗ್ಗಿ ಅಲ್ಲಿಯೂ ಜಾಲಾಡಿ ಸುಮಾರು ಐದು ಸಾವಿರ ರೂ. ಕಳವುಗೈದು ಅಲ್ಲಿಂದ ಹಿಂದಿರುಗುವ ವೇಳೆ ಅಲ್ಲಿದ್ದ ಸಿಸಿ ಕ್ಯಾಮರಾವನ್ನು ಗಮನಿಸಿದ್ದಾನೆ. ಇನ್ನು ತನ್ನ ಗುರುತು ಪತ್ತೆಯಾಗಬಹುದು ಎಂದುಕೊಂಡು ಅದರ ಸಂಪರ್ಕವನ್ನು ತುಂಡರಿಸಿ ಬಿಟ್ಟ. ಈ ವೇಳೆ ಆತನ ತಲೆಯ ಭಾಗಕ್ಕೆ ಹಿಂಭಾಗದ ಬಾಗಿಲು ಬಡಿದಿದೆ. ಅದರ ಹೊಡೆತಕ್ಕೆ ತೀವ್ರ ಗಾಯವುಂಟಾಗಿ ರಕ್ತ ಬರತೊಡಗಿದೆ. ಈ ಕಳ್ಳ ದಿಕ್ಕು ತೋಚದೆ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯವಾದ್ದರಿಂದ ಈತ ಮರಳಿ ಹೋದಲ್ಲೆಲ್ಲ ರಕ್ತ ಒಸರಿದೆ. ಅಲ್ಲಲ್ಲಿ ರಕ್ತದ ಕಲೆಗಳು ಪತ್ತೆಯಾಗಿದೆ.
ಮರುದಿನ ವಿಚಾರ ಗೊತ್ತಾಗಿ ಮೆಡಿಕಲ್ ಶಾಪ್ ಮಾಲೀಕ ಡಾ| ಸಂತೋಷ್, ಪಿಕಪ್ ವಾಹನದ ಚಾಲಕ ಯಶೋಧರ, ಮೂರ್ತೇದಾರರ ಬ್ಯಾಂಕ್ನ ವ್ಯವಸ್ಥಾಪಕರು ದೂರು ನೀಡಿದ್ದು, ಪೊಲೀಸರು ಕಳ್ಳನ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಈ ವೇಳೆ ಮೆಡಿಕಲ್ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳನ ಮುಖದ ಸಂಪೂರ್ಣ ಚಹರೆ ಪತ್ತೆಯಾಗಿದೆ. ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಮನೆ ನಿವಾಸಿ ಅಬ್ದುಲ್ ಖಾದರ್ ಅವರ ಮಗ ಅಶ್ರಫ್ ಅನ್ನೋದು ಗೊತ್ತಾಗಿದೆ. ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ತಣ್ಣಿರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣ ಕಾರ್ಯದಲ್ಲಿ ಕೆಲಸ ನಿರ್ವಹಿಸುತ್ತ ಕಳವು ಕೃತ್ಯಕ್ಕೆ ಯೋಗ್ಯ ಸ್ಥಳವನ್ನು ಗುರುತಿಸುತ್ತಿದ್ದನೆಂದೂ ತನಿಖೆಯ ವೇಳೆ ತಿಳಿದು ಬಂದಿದೆ. ಕಳವುಗೈದು ದೊರಕಿದ ಹಣದಿಂದ ಮೋಜು ಮಸ್ತಿ ನಡೆಸಿ ಚೀಲ ತುಂಬಾ ಹಣ್ಣು ಖರೀದಿಸಿ ಮನೆಯ ದಾರಿ ಹಿಡಿಯುವ ಯತ್ನದಲ್ಲಿದ್ದಾಗಲೇ ಪೊಲೀಸರ ವಶಕ್ಕೆ ಒಳಗಾದಂತಾಗಿದೆ.