ರಾಮನಗರ: ಕನಕಪುರ ತಾಲೂಕಿನಲ್ಲಿ ಚಿಣ್ಣರಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಪ್ರಕರಣದಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಮತ್ತೋರ್ವ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ.
ಹತ್ತು ವರ್ಷದ ಕೆಳಗಿನ ಅಪ್ರಾಪ್ತ ಮಕ್ಕಳಿಗೆ ಬಾಡೂಟ ಹಾಕಿ, ಮದ್ಯ ಕುಡಿಸಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗಡಿ ಭಾಗದ ಮರಳಿಪುರ ಎಂಬ ಗ್ರಾಮದಲ್ಲಿ ನಡೆದಿದೆ.
ಕಳೆದ ಹತ್ತು ದಿನಗಳ ಹಿಂದೆ ಗ್ರಾಮದ ಬಾಳೆ ತೋಟವೊಂದರಲ್ಲಿ ಬಾಡೂಟ ಆಯೋಜನೆ ಮಾಡಿದ್ದರು. ಈ ವೇಳೆ ಬಾಳೆ ತೋಟದಲ್ಲಿ 7 ಮಕ್ಕಳು ಬಾಡೂಟದ ಜತೆಗೆ ಮದ್ಯ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಮದ್ಯ ಕುಡಿದ ಮಕ್ಕಳು ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತಾರೆ. ಮದ್ಯ ಕುಡಿದ ಬಾಲಕನೊಬ್ಬ ನನಗೆ ಮತ್ತಷ್ಟು ಮದ್ಯ ಬೇಕು ಎಂದು ಕೂಗಾಡುವ ದೃಶ್ಯಗಳು ಎಲ್ಲರ ಮೊಬೈಲ್ಗಳಲ್ಲಿ ಹರಿದಾಡುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡ ಪೊಲೀಸರು ಘಟನೆಯನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಕೋಡಿಹಳ್ಳಿ ಠಾಣೆಯ ಪೊಲೀಸರು, ಪ್ರಕರಣ ಸಂಬಂಧ ಗಣೇಶ್ ಮತ್ತು ಕರಿಯಪ್ಪ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮತ್ತೊಬ್ಬ ಆರೋಪಿ ಸೋಮಸುಂದರ್ ಎಂಬುವವನು ತಲೆ ಮರೆಸಿಕೊಂಡಿದ್ದು, ಆತನ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಸ್ಪಷ್ಟಪಡಿಸಿದ್ದಾರೆ.