ಮೂಡಬಿದಿರೆ: ಕೃಷಿ ತಜ್ಞ, ಕೃಷಿ ಋಷಿ ಖ್ಯಾತಿಯ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್(90) ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.ಡಾ. ಎಲ್.ಸಿ . ಸೋನ್ಸ್ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ತನ್ನೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡ ಸಹೋದರ ಐ.ವಿ. ಸೋನ್ಸ್ ಇವರನ್ನು ಅಗಲಿದ್ದಾರೆ.
ಮಂಗಳವಾರವಷ್ಟೇ 89 ವರ್ಷ ತುಂಬಿ 90ಕ್ಕೆ ಕಾಲಿರಿಸಿದ್ದ ಡಾ.ಎಲ್.ಸಿ ಸೋನ್ಸ್ ತನ್ನ ಜೀವನವನ್ನು ಕೃಷಿಗಾಗಿ ಮುಡಿಪಾಗಿಟ್ಟವರು. ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಸೋನ್ಸ್ ಅನಾನಸು ಕೃಷಿ, ಬಿದಿರಿನ ವಿವಿಧ ಪ್ರಭೇದ, ದೇಶ-ವಿದೇಶಗಳ ಹಣ್ಣು-ತರಕಾರಿ ಪ್ರಭೇದಗಳನ್ನು ಮೂಡುಬಿದಿರೆ ಬನ್ನಡ್ಕದ ಮಣ್ಣಿನಲ್ಲಿ ಬೆಳೆಸಿ, ಅದರಿಂದ ಫಸಲು ಹಾಗೂ ಲಾಭ ಗಳಿಸಿದವರಾಗಿದ್ದಾರೆ. ಜಲ ತಜ್ಞರಾಗಿಯೂ ವಿಶೇಷ ಪರಿಣಿತಿಯನ್ನು ಹೊಂದಿದ್ದರು.
2006 ಸಾಧಕ ಪ್ರಶಸ್ತಿ, 2004 ದ.ಕ. ಜಿಲ್ಲಾ ರಾಜ್ಯೋತ್ಸವ, ಹಿರಿಯಡ್ಕದ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದಿಂದ ಬೆಸ್ಟ್ ಫಾರ್ಮರ್ ಪ್ರಶಸ್ತಿ, 2010-ಬಾಗಲಕೋಟೆ ತೋಟಗಾರಿಕಾ ವಿ.ವಿ.ಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಸನ್ಮಾನ ಸಹಿತ ದೇಶ ವಿದೇಶಗಳ ಹಲವಾರು ಸಂಘ ಸಂಸ್ಥೆಗಳು ಸೋನ್ಸ್ ಅವರ ಸಾಧನೆಯನ್ನು ಗೌರವಿಸಿದೆ. ಇಸ್ರೆಲ್ನಲ್ಲಿ ನಡೆದ ವಿಶ್ವ ನೀರಾವರಿ ಸಮ್ಮೇಳನಕ್ಕೆ ಭಾಗವಹಿಸಿ, ಅವುಗಳ ಮಾದರಿಯನ್ನು ತನ್ನೂರಿನಲ್ಲಿ ಪ್ರಯೋಗಿಸಿದ್ದಾರೆ.ಇವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.