ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಸೆಮಣೆ ಏರಬೇಕಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ತಮಿಳುನಾಡು ನೀಲಗಿರೀಸ್ ಮೂಲದ ಕವೀಶ (21) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯು ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ 7ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕೆಲವು ದಿನಗಳಿಂದ ಊಟಿ ನಗರ ನಿವಾಸಿಯಾದ ಕಿರಣ್ ಎಂಬಾತನನ್ನು ಪ್ರೀತಿಸಿದ್ದು, ಇಬ್ಬರ ಪ್ರೀತಿಯ ವಿಷಯ ತಿಳಿದ ಕುಟುಂಬಸ್ಥರು ನಿಶ್ಚಿತಾರ್ಥ ಕೂಡ ಮಾಡಿ ಮುಗಿಸಿದ್ದರು.
ಮದುವೆಗೆ ಮೊದಲೇ ಕಿರಣ್ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಪ್ರಾರಂಭವಾಗಿದ್ದು, ಕಾರು ಹಾಗೂ ಭಾರೀ ಮೊತ್ತದಲ್ಲಿ ಚಿನ್ನ ನೀಡಬೇಕು ಎಂದು ಬೇಡಿಕೆಯಿಟ್ಟು, ಪೀಡಿಸಿದ್ದಾರೆ. ಅಷ್ಟೇಅಲ್ಲದೇ ಕಾರು, ಚಿನ್ನ ನೀಡದಿದ್ದರೆ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಎಲ್ಲ ಕಾರಣಗಳಿಂದ ಮನನೊಂದಿದ್ದ ವಿದ್ಯಾರ್ಥಿನಿಯು ಆಕೆ ತಂಗಿದ್ದ ಹಾಸ್ಟೆಲ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸದ್ಯ ಈ ಸಂಬಂಧ ವಿದ್ಯಾರ್ಥಿನಿಯ ಪೋಷಕರು, ಮದುವೆ ಆಗಲು ಬಯಸಿದ್ದ ಕಿರಣ್ ಹಾಗೂ ತಂದೆ ಸೇತುಮಾಧವ, ತಾಯಿ ಲತಾ ಹಾಗೂ ಮಾವನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.