ಉಡುಪಿ: ಟೊಮೇಟೊ ಫ್ಲೂಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಸೂಕ್ತ ಮುನ್ನೆಚ್ಚರಿಕೆಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ. ಇಂದು ತಜ್ಞರ ಸಮಿತಿಯ ಸಭೆ ನಡೆಯಲಿದೆ. ಐದು ವರ್ಷದ ಒಳಗಿನ ಮಕ್ಕಳಿಗೆ ಜ್ವರ ಬಾಧಿಸುತ್ತದೆ. ಚರ್ಮದಲ್ಲಿ ತುರಿಕೆ ಜ್ವರ ಮೈಕೈ ನೋವು ಸುಸ್ತು ಸಾಮಾನ್ಯ ಲಕ್ಷಣಗಳು ಇರುತ್ತವೆ. ಈ ಬಗ್ಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಿಗೆ ಮುನ್ನೆಚ್ಚರಿಕೆ ನೀಡಿದ್ದೇವೆ ಎಂದು ಉಡುಪಿ ಡಿಎಚ್ ಓ ಡಾ. ನಾಗಭೂಷಣ್ ಹೇಳಿದ್ದಾರೆ.
ಇಂತಹ ಪ್ರಕರಣಗಳು ಕಂಡುಬಂದರೆ ಆರೋಗ್ಯ ಇಲಾಖೆಗೆ ತಿಳಿಸುವಂತೆ ಹೇಳಿದ್ದೇವೆ. ಆಶಾ ಕಾರ್ಯಕರ್ತೆಯರ ಮೂಲಕ ಜನರಿಗೆ ಮನವರಿಕೆ ಮಾಡುತ್ತೇವೆ. ನಮಗೆ ಕೇರಳದ ಗಡಿಭಾಗ ಇಲ್ಲ. ಆದರೆ ಕೇರಳದಿಂದ ಅನೇಕ ಪ್ರಯಾಣಿಕರು ಬರುತ್ತಾರೆ. ಕೊಲ್ಲೂರು ಸೇರಿದಂತೆ ದೇವಾಲಯಗಳಿಗೆ ಜನರು ಬರುತ್ತಾರೆ. ಸೂಕ್ಷ್ಮ ಭಾಗಗಳಲ್ಲಿ ವಿಶೇಷ ಮುತುವರ್ಜಿ ವಹಿಸಲಾಗುವುದು. ಕೋವಿಡ್ಗೂ ಟೊಮೇಟೊ ಫ್ಲೂಗೂ ಸಂಬಂಧ ಇಲ್ಲ. ಇದೊಂದು ಪ್ರತ್ಯೇಕ ವೈರಸ್ ಎಂದು ಸ್ಪಷ್ಟಪಡಿಸಿದ್ದಾರೆ.