ಹಾವೇರಿ : ರಾಜ್ಯದಲ್ಲಿ ಹಲವೆಡೆ ದನ/ಎಮ್ಮೆಗಳಲ್ಲಿ ಜಾನುವಾರು ಚರ್ಮ ಗಂಟು ರೋಗ ಕಾಣಿಸಿಕೊಂಡಿರುವುದರಿಂದ, ಚರ್ಮಗಂಟು ರೋಗಬಾಧಿತ ಹಸುವಿನ ಹಾಲು ಸೇವಿಸಬಾರದು ಎಂದು ಬೆಂಗಳೂರು ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಉತ್ಪಾಲ ಟಾಟು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ರೋಗಬಾಧಿತ ಹಳ್ಳಿಗಳಾದ ಬಸಲಿಕಟ್ಟಿ ತಾಂಡ, ಐರಣಿ, ಅರೆಮಲ್ಲಾಪುರ ಹಾಗೂ ಸೋಮಲಾಪುರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ನಂತರ ಮಾತನಾಡಿದ ಅವರು, ಚರ್ಮಗಂಟು ರೋಗಬಾಧಿತ ಹಸುವಿನ ಹಾಲು ಸೇವಿಸಬಾರದು. ಕರುವಿಗೂ ಕುಡಿಸಬಾರದು, ಮಾರಾಟ ಮಾಡಬಾರದು ಅದನ್ನು ನಾಶಪಡಿಸಬೇಕು ಎಂದು ಹೇಳಿದ್ದಾರೆ.
ಚರ್ಮಗಂಟು ರೋಗಕ್ಕೆ ಇದುವರೆಗೂ ಯಾವುದೇ ಲಸಿಕೆ ಕಂಡು ಹಿಡಿಯಲಾಗದಿದ್ದರೂ ರೋಗ ಹರಡದಂತೆ ನೋಡಿಕೊಳ್ಳುವುದು ಬಹುಮಖ್ಯವಾಗಿದೆ. ರೋಗಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಕೂಡ ಆರೋಗ್ಯವಂತ ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡಬಾರದು ಮತ್ತು ನೇರ ಸಂಪರ್ಕಕ್ಕೆ ಬರಬಾರದು ಇದರಿಂದಲೂ ರೋಗ ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.