ಕೊಡಗು; ಸಂಶಯಾಸ್ಪದವಾಗಿ ವೈದ್ಯರ ಮೃತದೇಹ ಕಾರಿನಲ್ಲಿ ಪತ್ತೆಯಾಗಿರುವ ಘಟನೆ ಕುಶಾಲನಗರ ಸಮೀಪದ ಆನೆಕಾಡಿನಲ್ಲಿ ನಡೆದಿದೆ.
ಪಿರಿಯಾಪಟ್ಟಣದ ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ಸತೀಶ್ (48) ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ಸತೀಶ್ ಮೂಲತಃ ಮಂಡ್ಯ ಪಾಂಡವಪುರ ನಿವಾಸಿ.ಮಂಡ್ಯದಿಂದ ಮಡಿಕೇರಿಯತ್ತ ತಮ್ಮ ಕಾರಿನಲ್ಲಿ ಡಾ ಸತೀಶ್ ಆಗಮಿಸುತ್ತಿದ್ದರು ಎನ್ನಲಾಗಿದೆ. ಇನ್ನು ಎಡಗೈಗೆ ಸಿರಂಜ್ ಚುಚ್ಚಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು ವಿಷ ತೆಗೆದುಕೊಂಡಿರುವ ಶಂಕೆ ವ್ಯಕ್ತಗೊಂಡಿದೆ. ಹೆದ್ದಾರಿಯ ಒಂದು ಭಾಗದಲ್ಲಿ ಮಾರುತಿ ಸೆಲೆರಿಯೋ ಕಾರು ನಿಲುಗಡೆ ಸ್ಥಿತಿಯಲ್ಲಿ ತುಂಬಾ ಹೊತ್ತಿನಿಂದ ನಿಂತಿರುವುದು ಕಂಡ ಸ್ಥಳೀಯರು ಪರಿಶೀಲಿಸಿದ ಸಂದರ್ಭ ಚಾಲನೆ ಸೀಟ್ ನಲ್ಲಿ ವೈದ್ಯರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಠಾಣಾಧಿಕಾರಿ ಮೋಹನ್ ರಾಜ್ ಸೇರಿದಂತೆ ವಿಧಿವಿಜ್ಞಾನ ಪ್ರಯೋಗಾಲದವರು ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಮೃತರ ಪತ್ನಿ ಕುಸುಮ ಕೂಡ ವೈದ್ಯರಾಗಿದ್ದು ಮಂಡ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪಿರಿಯಾಪಟ್ಟಣ ಆಸ್ಪತ್ರೆ ಸಹಾಯಕ ಸಿಬ್ಬಂದಿಯ ಹೇಳಿಕೆ ಪ್ರಕಾರ, ಸ್ನೇಹಜೀವಿಯಾಗಿದ್ದ ವೈದ್ಯರು ಎಂದಿನಂತೆ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಂದರ್ಭ ಕೊಂಚ ಬಳಲಿದಂತೆ ಕಂಡು ಬಂದಿದ್ದರು ಎನ್ನಲಾಗಿದೆ. ಒಂದು ಬಾರಿ ವಾಂತಿ ಕೂಡ ಮಾಡಿಕೊಂಡು ಬಳಿಕ ಕಾರಿನಲ್ಲಿ ವಿಶ್ರಮಿಸುವುದಾಗಿ ಹೇಳಿ ತೆರಳಿದ್ದಾರೆ. ಮಡಿಕೇರಿ ಬಗ್ಗೆ ಅಷ್ಟಾಗಿ ಮಾಹಿತಿಯಿಲ್ಲದ ವೈದ್ಯರು ಇತ್ತ ಯಾಕೆ ಬಂದರು ತಿಳಿದಿಲ್ಲ ಎಂದಿದ್ದಾರೆ.