ನೆಲ್ಯಾಡಿ: ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರ ಫೋಟೋ ಹಾಕಿ ನೆಲ್ಯಾಡಿ ಖಾಸಗಿ ಶಾಲೆಯಿಂದ ವಿದ್ಯಾರ್ಥಿನಿಯೋರ್ವಳನ್ನು ಕಿಡ್ನಾಪ್ ಮಾಡಲು ಯತ್ನಿಸಿ ಪರಾರಿಯಾದ ಎಂಬ ಸುದ್ದಿ ಹಬ್ಬಿದ್ದು ಪ್ರಕರಣದ ಸತ್ಯಂಶ ಹೊರಬಿದ್ದಿದೆ.
ಕಿಡ್ನಾಪ್ ಮಾಡಿದ್ದಾನೆ ಎನ್ನುವ ವ್ಯಕ್ತಿ ಬಾಲಕಿಯ ಸಂಬಂಧಿಯಾಗಿದ್ದು, ಬಾಲಕಿ ಪುಟ್ಟ ಹುಡುಗಿಯಾಗಿದ್ದರಿಂದ ಆಕೆಯ ಮೇಲಿನ ಪ್ರೀತಿಯಿಂದ ತಿಂಡಿ, ಬಟ್ಟೆ ಸಹಿತ ಇನ್ನಿತರ ವಸ್ತುಗಳನ್ನು ಆಕೆಗೆ ನೀಡಲು ಶಾಲೆಗೆ ಬಂದಿದ್ದ. ಈ ವೇಳೆ ಈವರೆಗೂ ಆತನನ್ನು ಕಾಣದ ಕಲವರಿಗೆ ಆತ ಅಪರಿಚಿತನಾಗಿ ಕಂಡುಬಂದಿದ್ದು ಬಾಲಕಿಗೂ ಭಯವಾಗಿದೆ.
ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಿಡ್ನಾಪ್ ಮಾಡಲು ಬಂದಿದ್ದಾನೆ ಎಂಬ ಸುದ್ದಿ ನೆಲ್ಯಾಡಿ, ಧರ್ಮಸ್ಥಳ, ಕೊಕ್ಕಡ ಪರಿಸರದಲ್ಲೆಲ್ಲಾ ಹಬ್ಬಿದ್ದು ಕೂಡಲೇ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಪೊಲೀಸರು ವ್ಯಕ್ತಿಯನ್ನು ಕೊಕ್ಕಡ ಸಮೀಪ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆಗಾಗಿ ನೆಲ್ಯಾಡಿ ಪೊಲೀಸ್ ಹೊರ ಠಾಣೆಗೆ ಹಸ್ತಾಂತರಿಸಲಾಗಿದೆ.
ಸದ್ಯ ಪ್ರಕರಣದ ಸತ್ಯತೆ ಹೊರಬಂದಿದ್ದು ವ್ಯಕ್ತಿ ಬಾಲಕಿಯರ ಸಂಬಂಧಿಯಾಗಿದ್ದು ಹಾಗೂ ಕೌಟುಂಬಿಕ ಸಮಸ್ಯೆಯಿಂದ ದೂರವಾದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ನೆಲ್ಯಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ರೂ, ಪ್ರಕರಣ ರಾಜಿಯಲ್ಲಿ ಕೊನೆಗಾಣಲಿದೆ. ಸಾರ್ವಜನಿಕರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಆತಂಕಗೊಳಿಸಲು ಮುಂದಾಗದಿರಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.