ಬೆಂಗಳೂರು: 2020-21 ನೇ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನ ಇಂದು ಕ್ರೀಡಾ ಇಲಾಖೆ ಘೋಷಣೆ ಮಾಡಿದೆ. ಈ ಬಗ್ಗೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಯುವಜನ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ. ಏಕಲವ್ಯ ಪ್ರಶಸ್ತಿಗೆ 15 ಕ್ರೀಡಾಪಟುಗಳು, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14 ಕ್ರೀಡಾಪಟುಗಳು, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ 10 ಕ್ರೀಡಾಪಟುಗಳು ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರು ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್ನಲ್ಲಿ ಜೀವನ್ ಕೆಎಸ್, ನೆಟ್ ಬಾಲ್ ನಿತಿನ್, ಬ್ಯಾಡ್ಮಿಂಟನ್ ಅಶ್ವಿನಿ ಭಟ್, ರೋಯಿಂಗ್ ಜಿ ತರುಣ್ ಕೃಷ್ಣಪ್ರಸಾದ್, ಬ್ಯಾಸ್ಕೆಟ್ ಬಾಲ್ ಲೋಪಮುದ್ರಾ ತಿಮ್ಮಯ್ಯ, ಈಜು ಲಿಖಿತ್ ಎಸ್ಪಿ, ಕ್ರಿಕೆಟ್ ಕರುಣ್ ನಾಯರ್, ಟೇಬಲ್ ಟೆನ್ನಿಸ್ ಅನರ್ಘ್ಯ ಮಂಜುನಾಥ್, ಸೈಕ್ಲಿಂಗ್ ದಾನಮ್ಮ , ವಾಲಿಬಾಲ್ ಅಶ್ವಲ್ ರೈ, ಜುಡೋ ವಸುಂಧರಾ ಎಂ ಎನ್, ಹಾಕಿ ಪ್ರಧಾನ್ ಸೋಮಣ್ಣ, ಕಬಡ್ಡಿ ಪ್ರಶಾಂತ್ ಕುಮಾರ್ ರೈ, ಪ್ಯಾರಾ ಅಥ್ಲೆಟಿಕ್ಸ್ ರಾಧಾ ವಿ, ಖೋಖೋ ಮುನೀರ್ ಬಾಷಾ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಇನ್ನು ಜೀವಮಾನ ಸಾಧನಾ ಪ್ರಶಸ್ತಿಗೆ ಅಥ್ಲೆಟಿಕ್ಸ್ನಲ್ಲಿ ಗಾವಂಕರ್ ಜಿವಿ, ಕಯಾಕಿಂಗ್ ಮತ್ತು ಕನೋಯಿಂನಲ್ಲಿ ಕ್ಯಾಪ್ಟನ್ ದಿಲೀಪ್ ಕುಮಾರ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ವಿಜೇತರಲ್ಲಿ ಕರಾವಳಿಯ ನಾಲ್ವರು ಪ್ರತಿಭೆಗಳಿರೋದು ಹೆಮ್ಮೆ ವಿಚಾರ. ಕಬಡ್ಡಿಯಲ್ಲಿ ಪುತ್ತೂರಿನ ಮುತ್ತು ಪ್ರಶಾಂತ್ ರೈ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದರೆ, ವಾಲಿಬಾಲ್ ನಲ್ಲಿ ಎಸ್ ಡಿ ಎಂ ಕಾಲೇಜಿನ ಅಶ್ವಲ್ ರೈ ಹಾಗೂ ನೆಟ್ ಬಾಲ್ ನಲ್ಲಿ ನಿತಿನ್ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಕಂಬಳ ಓಟಗಾರ ಗೋಪಾಲ ನಾಯ್ಕ್ ಆಯ್ಕೆಯಾಗಿದ್ದಾರೆ. ಕ್ರೀಡಾ ಪೋಷಕ ಪ್ರಶಸ್ತಿಗೆ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನಲ್ ಟ್ರಸ್ಟ್ ಮತ್ತು ಮಂಗಳೂರಿನ ಬಾಲಾಂಜನೇಯ ಜಿಮ್ನಾಶಿಯಂ ಆಯ್ಕೆಯಾಗಿವೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.