
ಮಂಗಳೂರು: ಕೋವಿಡ್ ರೂಪಾಂತರಿ ಜೆಎನ್ 1 ಆತಂಕದ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳ ಸಂಪರ್ಕಿಸುವ ಗಡಿಗಳಲ್ಲಿ ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ.
ತಲಪಾಡಿ ಗಡಿ ಮೂಲಕ ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಂಗಳೂರಿಗೆ ಬರುವ ಕಾರಣದಿಂದ ತಲಪಾಡಿ ಗಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಚೆಕ್ ಪೋಸ್ಟ್ ತೆರೆದು ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.
ಕಡ್ಡಾಯ ತಪಾಸಣೆ ಇಲ್ಲದಿದ್ದರೂ ಆರೋಗ್ಯ ಸಿಬ್ಬಂದಿಯಿಂದ ಜನರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದ್ದು, ಐಎಲ್ ಐ ಮತ್ತು ಸಾರಿ ಪ್ರಕರಣಗಳ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗುತ್ತಿದೆ.
ಇನ್ನು ಕೇರಳದ ಗಡಿ ಇರುವ ಸುಳ್ಯ ತಾಲೂಕಿನ ಜಾಲ್ಸೂರು, ಪುತ್ತೂರು ತಾಲೂಕಿನ ಸ್ವರ್ಗ ಮತ್ತು ಈಶ್ವರಮಂಗಲ, ಬಂಟ್ವಾಳ ತಾಲೂಕಿನ ಸಾರಡ್ಕ ಗಡಿಗಳಲ್ಲಿ ನಿರ್ಬಂಧ ಇರದಿದ್ದರೂ ಎಚ್ಚರಿಕೆ ವಹಿಸಲಾಗಿದೆ.
ಇದೇ ವೇಳೆ ಶಬರಿಮಲೆ ಯಾತ್ರೆ ಕೈಗೊಂಡು ವಾಪಸಾಗುವವರಿಗೆ ರೋಗ ಲಕ್ಷಣಗಳಿದ್ದಲ್ಲಿ ಕೂಡಾ ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.


