ಶಿವಮೊಗ್ಗ: ಇಲ್ಲಿನ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನ.30 ಶನಿವಾರದಂದು ಕೆಡಿಪಿ ಸಭೆಯನ್ನು ಹಮ್ಮಿಕೊಂಡಿದ್ದು, ಸಭೆಯಲ್ಲಿ ಮಧ್ಯದಲ್ಲಿ ವೇದಿಕೆಯಲ್ಲೇ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ವೇದಿಕೆಯಲ್ಲೇ ದಿಢೀರ್ ಅಸ್ವಸ್ಥರಾದ ಘಟನೆ ನಡೆಯಿತು.
ಸಭಾಂಗಣದಲ್ಲಿಯೇ ಉಪಸ್ಥಿತರಿದ್ದ ಎಂಎಲ್ಸಿ ಡಾ.ಧನಂಜಯ ಸರ್ಜಿ ಆರೋಗ್ಯ ಪರಿಶೀಲಿಸಿದರು.
ತ್ರೈಮಾಸಿಕ ಕೆಡಿಪಿ ಸಭೆಯು 11 ಗಂಟೆಗೆ ಆರಂಭವಾಗಬೇಕಿದ್ದು, ವಿಳಂಬವಾಗಿ 1 ಗಂಟೆಗೆ ನಂತರ ಶುರುವಾಯಿತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರು ಸಭೆಗೆ ಬರುವಾಗಲೇ ಡಲ್ ಆಗಿದ್ದು, ಸಭೆ ಶುರುವಾದ ಕೆಲವೇ ನಿಮಿಷಗಳಲ್ಲಿ ಅಸ್ವಸ್ಥರಾದ್ದಂತೆ ಕಂಡುಬಂದು ಖುರ್ಚಿ ಮೇಲೆ ಕುಸಿದರು. ಕೆಲಕ್ಷಣ ಅಧಿಕಾರಿಗಳು ಆತಂಕಕ್ಕೆ ಒಳಗಾದರು.
ಈ ಸಂದರ್ಭದಲ್ಲಿ ಅಲ್ಲೇ ಉಪಸ್ಥಿತರಿದ್ದ ಡಿಎಚ್ಇ ಡಾ.ನಟರಾಜ್, ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್ ಆರೋಗ್ಯ ವಿಚಾರಿಸಿದರು. ಬೆಂಗಳೂರಿನಿಂದ ಸಭೆಯ ಕಾರಣಕ್ಕೆ ಬೆಳಗ್ಗೆ ಹೊರಟಿದ್ದೇ ಆಯಾಸಕ್ಕೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.