ಬಾಗಲಕೋಟೆ: ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ ಎಂದರೆ ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ 30 ರಷ್ಟು ಕಮಿಷನ್ ನೀಡಬೇಕಿದೆ. ಎಂದು ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬೀಳಗಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಭಾನುವಾರ ಆಯೋಜಿಸಿದ್ದ ಕೃಷ್ಣಾ ಮಹಾದಾಯಿ-ನವಲಿ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಠಗಳಿಗೆ ಬಿಡುಗಡೆ ಆದ ಅನುದಾನದಲ್ಲಿ ಪರ್ಸೆಂಟೇಜ್ ಕಡಿತ ಆದ ನಂತರವೇ ಕಟ್ಟಡದ ಕೆಲಸ ಆರಂಭವಾಗುತ್ತದೆ. ಇಲ್ಲದಿದ್ದರೆ ಆಗೊಲ್ಲ. ಆ ಅಧಿಕಾರಿಗಳು ಬಂದು ನಮಗೆ ಹೇಳುತ್ತಾರೆ. ಇಷ್ಟು ರೊಕ್ಕ ಕಡಿತ ಮಾಡದಿದ್ದರೆ ನಿಮ್ಮ ಕೆಲಸವಂತೂ ಆಗುವುದಿಲ್ಲ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಂತೂ ರಾಜ್ಯದಲ್ಲಿ ಬುದ್ಧಿಗೇಡಿ ಸರ್ಕಾರಗಳು ಬರುತ್ತಿವೆ. ಕಾಂಕ್ರೀಟ್ ರಸ್ತೆ ಮೆಷಿನ್ ಹಚ್ಚಿ ಒಡೆಸಿ ಪೈಪ್ಲೈನ್ ಹಾಕಿ ನಳದ ಮೂಲಕ ನೀರು ಕೊಡುವ ಬದಲಿಗೆ ರೈತನ ಹೊಲಗಳಿಗೆ ನೀರು ಕೊಡಿ ಎಂದು ಆಗ್ರಹಿಸಿದ ಅವರು, ಉತ್ತರ ಭಾರತದಲ್ಲಿ ಒಂದು ವರ್ಷ ಕಾಲ ಸಾವು ನೋವಿಗೂ ಅಂಜದೇ ರೈತರು ನಡೆಸಿದ ಹೋರಾಟದ ಮಾದರಿಯ ಪ್ರತಿರೋಧಕ್ಕೆ ಇಲ್ಲಿಯ ರೈತರು ಸಿದ್ಧರಾದರೆ ಮಾತ್ರ ನಿಮಗೆ ಅನ್ನಸಿಕ್ಕೀತು. ಇಲ್ಲದಿದ್ದರೆ ಏನೂ ಸಿಗೊಲ್ಲ. ನೀವು ಬಹಳ ಜಾಣರಾಗಬೇಕು’ ಎಂದು ಕಿವಿಮಾತು ಹೇಳಿದರು.