ಚಿತ್ರದುರ್ಗ: ಮನೆಯೊಂದರಲ್ಲಿ ಲಕ್ಷಾತರ ರೂಪಾಯಿಯ ಚಿನ್ನಾಭರಣ ಕಳ್ಳತನ ಮಾಡಿ, ಜೊತೆಗೆ ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನು ಕದ್ದು ಕೊನೆಗೂ ಎಲ್ಲವನ್ನೂ ಬಿಟ್ಟು ಪರಾರಿಯಾಗಿರುವ ಅಚ್ಚರಿಯ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮಾ.13ರ ರಾತ್ರಿರಂದು ಚಿತ್ರದುರ್ಗದ ಬಸವೇಶ್ವರ ನಗರದಲ್ಲಿರುವ ಎಸ್ಪಿ ಕಚೇರಿಯ ಸಿಪಿಐ ಮೃತ್ಯುಂಜಯರ ಅವರ ಮನೆಯಲ್ಲಿ ಕಳವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೂ ಕಳ್ಳರು ದೋಚಿದ್ದರು. ಇದು ಪೊಲೀಸ್ ಅಧಿಕಾರಿಯೊಬ್ಬರ ಮನೆ ಎಂಬುದು ಆರಂಭದಲ್ಲಿ ಆ ಖದೀಮರಿಗೂ ಗೊತ್ತಿರಲಿಲ್ಲ ಅನ್ನಿಸುತ್ತೆ. ಕಳ್ಳತನ ಆಗಿರುವ ಬಗ್ಗೆ ಮಾ.14ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆ ದಿನವೇ ಖದೀಮರು ಕದ್ದ ಕಾರಿನಲ್ಲಿ ಬೆಳ್ಳಿ ಆಭರಣ, ಪಿಸ್ತೂಲ್ ಇಟ್ಟು ಆ ಕಾರನ್ನು ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ ದೇವಾಲಯ ಆವರಣದಲ್ಲಿ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿದ್ದ ಪೊಲೀಸ್ ಲಾಠಿ, ಐಡಿ ಕಾರ್ಡ್ ನೋಡಿ ಬೆಚ್ಚಿಬಿದ್ದ ಕಳ್ಳರು, ಇದು ಪೊಲೀಸ್ ಅಧಿಕಾರಿಯದ್ದು. ನಮ್ಮನ್ನು ಬಿಡಲ್ಲ ಎಂದು ಭಯಗೊಂಡು ವಾಪಸ್ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಆದರೆ, ಕದ್ದಿದ್ದ ನಗದನ್ನು ಕಳ್ಳರು ಇಟ್ಟಿಲ್ಲ, ಇನ್ನೂ ಸ್ವಲ್ಪ ಚಿನ್ನಾಭರಣ ರಿಕವರಿ ಆಗಬೇಕಿದೆಯಂತೆ.
ಕಾರು ಕಳುವು ಮತ್ತು ಅದನ್ನು ವಾಪಸ್ ಬಿಟ್ಡು ಹೋಗಿರುವ ಕುರಿತು ಎಸ್ಪಿ ರಾಧಿಕಾ ಖಚಿತ ಪಡಿಸಿದ್ದಾರೆ. ಕಾರಿನಲ್ಲಿದ್ದ ಲಾಠಿ ನೋಡಿ ಹಿಂತಿರುಗಿಸಿದ್ದಾರೋ ಅಥವಾ ಬೇರೆ ಕಾರಣಕ್ಕೆ ಬಿಟ್ಟು ಹೋಗಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾರು ಸಿಕ್ಕಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.