ಧಾರವಾಡ: ಇಲ್ಲಿನ ಇಟ್ಟಿಗಟ್ಟಿ ಬಳಿ ಇಂದು ಬೆಳಗ್ಗೆ ಟೆಂಪೋ ಟ್ರಾವೆಲರ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಟೆಂಪೋದಲ್ಲಿ 11 ಮಂದಿ ಮೃತಪಟ್ಟಿರುವ ಘಟನೆಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಪ್ರದಾನಿ ಮೋದಿ ಕೂಡ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ ಮೃತರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, ಬಹುತೇಕರು ವೈದ್ಯಕೀಯ ವೃತ್ತಿಯಲ್ಲಿದ್ದರು ಮತ್ತು ಇವರೆಲ್ಲರೂ ಶಾಲಾ ಸ್ನೇಹಿತರಾಗಿದ್ದು, ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸ ಹೊರಟ್ಟಿದ್ದರು. ಮೃತ 11 ಮಹಿಳೆಯರ ಪೈಕಿ ನಾಲ್ವರು ವೈದ್ಯರಾಗಿದ್ದರೆ, ಇತರರು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಶಾಲಾ ಸ್ನೇಹಿತರಾಗಿದ್ದು, ಗೋವಾಕ್ಕೆ ಒಂದು ದಿನದ ಟ್ರಿಪ್ ಹೊರಟ್ಟಿದ್ದರು.
ಟೆಂಪೋ ಟ್ರಾವೆಲರ್ ದಾವಣಗೆರೆಯಿಂದ ಪಣಜಿಗೆ ತೆರಳುತ್ತಿದ್ದು, ಲಾರಿ ಬೆಳಗಾವಿಯಿಂದ ಬರುತ್ತಿದ್ದಾಗ ಈ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋ ಟ್ರಾವೆಲರ್ನಲ್ಲಿದ್ದ 11 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರನ್ನು ಪ್ರವೀಣ್, ಆಶಾ, ಮೀರಾಬಾಯಿ, ಪರಂಜ್ಯೋತಿ, ರಾಜೇಶ್ವರಿ, ಶಕುಂತಲಾ, ಉಷಾ, ವೇದಾ, ವೀಣಾ, ಮಂಜುಳಾ, ನಿರ್ಮಲಾ, ರಜನೀಶಿ, ಪ್ರೀತಿ ಎಂದು ಗುರುತಿಸಲಾಗಿದೆ. ಚಾಲಕನ ಹೆಸರು ತಿಳಿದು ಬಂದಿಲ್ಲ.
ಮೃತರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, 16 ಮಹಿಳೆಯರು ಲೇಡಿಸ್ ಕ್ಲಬ್ನಿಂದ ಸಂತೋಷ ಕೂಟಕ್ಕಾಗಿ ಗೋವಾಕ್ಕೆ ಹೊರಟಿದ್ದರು ಎಂದು ಗಾಯಗೊಂಡವರ ಪೈಕಿ ಮಹಿಳೆಯೊಬ್ಬರು ಹೇಳಿಕೆ ನೀಡಿದ್ದಾರೆ. ಗಾಯಗೊಂಡ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.
ಪ್ರವಾಸಕ್ಕೆ ಹೊರಡುವ ಸಂದರ್ಭ ದಾವಣಗೆರೆಯಲ್ಲಿ ತೆಗೆದುಕೊಂಡ ಸೆಲ್ಫಿ ಈಗ ಎಲ್ಲಡೆ ಹರಿದಾಡುತ್ತಿದೆ. ಆದರೆ ಆ ಖುಷಿ ಕೆಲವೇ ಕ್ಷಣಗಳಲ್ಲಿ ಇಲ್ಲವಾಗಿದೆ. ಪ್ರವಾಸಕ್ಕೆಂದು ಹೊರಟವರು ಸಾವಿನ ಮನೆ ಸೇರುವಂತಾಗಿದೆ.