ಬೆಳ್ತಂಗಡಿ: ಇಲ್ಲಿನ ಕಲ್ಮಂಜ ಗ್ರಾಮದ, ನಿಡಿಗಲ್ ಎಂಬಲ್ಲಿ ಮನೆ ದರೋಡೆ ಯತ್ನ ಪ್ರಕರಣ ನಡೆದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ಭೇದಿಸುವಲ್ಲಿ ಧರ್ಮಸ್ಥಳ ಪೊಲೀಸರು ಸಫಲರಾಗಿದ್ದರು.ಸಿಪಿಐ ಬೆಳ್ತಂಗಡಿ ಮತ್ತು ಪಿಎಸ್ಐ ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಗಳನ್ನೊಳಗೊಂಡ ಎರಡು ತಂಡಗಳನ್ನು ರಚಿಸಿ, ಬಂಟ್ವಾಳ ತಾಲೂಕು ಮೇಲ್ಕಾರ್ ಬಳಿ ಬಜಾಲ್ ಪಡ್ಪು ಇರ್ಫಾನ್ (25) ಮತ್ತು ಅರ್ಕುಳದ ಮಹಮ್ಮದ್ ತೌಸೀಫ್ (26) ಎಂಬಿಬ್ಬರು ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದಾರೆ.
ಅವರು ನೀಡಿದ ಮಾಹಿತಿಯಂತೆ ಇತರ ಆರೋಪಿಗಳಾದ ಬೆಳಾಲು ಚಿದಾನಂದ ಗೌಡ(25) ಮತ್ತು ಕಲ್ಮಂಜ ಮೋಹನ(32) ಎಂಬವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಅಪರಾಧಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆರೋಪಿತರುಗಳಿಂದ ಪ್ರಕರಣದಲ್ಲಿ ಬಳಸಿದ ಮಾರುತಿ ಸುಜುಕಿ ಕಂಪೆನಿಯ ವಿಟರಾ ಬ್ರೀಝಾ ಹಾಗೂ ಸ್ವಿಫ್ಟ್ ಕಾರು, ತಲುವಾರು ಮತ್ತು ಕಬ್ಬಿಣದ ರಾಡ್ , ಹಾಗೂ ನಾಲ್ಕು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.